Thursday, July 23, 2020

ಪ್ರೇಮದ ಅನ್ವೇಷಣೆ ಭಾಗ-7

ಮನಸ್ಸಿನಲ್ಲಿ ಎಲ್ಲೋ ಪ್ರತಿಯೊಂದುನ್ನು ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುವ ಮಾತು ಸತ್ಯವೆನಿಸಿತು. ರೈಲಿನಿಂದ ಇಳಿದು ನೇರವಾಗಿ ರೈಲಿನ ವಿಚಾರಣೆಯ ತಿಳಿಯುವ ಸಲುವಾಗಿ ಅಲ್ಲಿದ್ದವರನ್ನು ಕೇಳಿದ ಅವರು ಶಿವಮೊಗ್ಗದ ಕಡೆ ಸಂಜೆಯತನಕ ಯಾವುದೇ ರೈಲು ಗಾಡಿಗಳು ಇರುವುದಿಲ್ಲ ಎಂದರು. ಬೀರೂರಿನಿಂದ ಬಸ್ ನಿಲ್ದಾಣಕ್ಕೆ ಒಂದುವರೆ ಕಿಲೋಮೀಟರ್ ದೂರ, ಬೇಸಿಗೆಯ ಬಿಸಿಲು ಬೇರೆ, ಬಿಸಿಲು ಕಣ್ಣಿಗೆ ರಾಚುತ್ತಿತ್ತು . ಆಟೋಗಾಗಿ ಕಾದರೂ ಒಂದು ಆಟೋ ಬಾರದೆ ಹೋಯಿತು. ಇದ್ದ ಎರಡು ಆಟೋಗಳು ಮೊದಲೇ ಬುಕ್ ಆಗಿದ್ದವು. ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಗಲು ಬೇರೆ ಅವಕಾಶವಿಲ್ಲದ ಕಾರಣ ವಿಧು ತನ್ನ ಮಣಬಾರದ ಬ್ಯಾಗಿನೊಂದಿಗೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದ, ಬರುವ ದಾರಿಯಲ್ಲಿ ಬಹಳ ಬಾಯಾರಿಕೆಯಾಗಿ ನೀರಿನ ಬಾಟಲ್ ನಿಂದ ನೀರು ಕುಡಿಯಲು ತೆಗೆದರೆ ನೀರು ಕೂಡ ಸಣ್ಣ ಪ್ರಮಾಣದ ಬಿಸಿಯಾಗಿದ್ದ ಅನುಭವ.  ಅಬ್ಬಾ ಎಂತಹ ಬಿಸಿಲಿನ ಝಳ ಎಂದುಕೊಂಡು ಮುಂದೆ ಹೆಜ್ಜೆ ಇಡಬೇಕಾದರೆ ವಿಧುವಿನ ಗೆಳೆಯನಾದ ಅನಿಕೇತ ಸಿಕ್ಕಿದ.
            ವಿಧು ನೀನೇನು ಇಲ್ಲಿ ಎಂದು ಕೇಳಿದ ? ವಿಧು ತಮಾಷೆಗಾಗಿ ಮದುವೆಯ ಪ್ರವಚನ ಗುಂಗಿನಿಂದ ಹೊರಬಂದಿರಲಿಲ್ಲದವನ ಆಗಿದ್ದರಿಂದ ಇಲ್ಲೇ ಮದುವೆಯಾಗಲು ಹೆಣ್ಣು ನೋಡಲು ಬಂದಿದ್ದೇನೆ ಎಂದು ತಮಾಷೆ ಮಾಡಿದ. ಅದಕ್ಕೆ ನಕ್ಕ ಅನಿಕೇತ್ ತುಂಬಾ ದಿನಗಳ ನಂತರ ಸಿಕ್ಕಿದಿಯಾ ಬಾ ಏನಾದರೂ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿಯೋಣ ಎಂದ. ವಿಧು ಕೂಡ ತುಂಬಾ ದಿನಗಳ ನಂತರ ಸಿಕ್ಕ ಸ್ನೇಹಿತನ ಖುಷಿಗಾಗಿ ಸರಿ ನಡಿ ಹೋಗೋಣವೆಂದ. ಅನಿಕೇತ್ ತನ್ನ ಬೈಕಿನಲ್ಲಿ ಮಣಭಾರದ ಬ್ಯಾಗನ್ನು ಇಟ್ಟುಕೊಂಡು ಕೇಳಿದ ಹೆಣ್ಣು ನೋಡಲು ಬಂದೆ ಎಂದು ಹೇಳಿದೆ ,ನೋಡಿದರೆ ಇಷ್ಟು ದೊಡ್ಡದಾದ ಭಾರವಾದ ಬ್ಯಾಗನ್ನು ಇಟ್ಟುಕೊಂಡಿದಿಯಲ್ಲ ಎಂದ. ಅವನ ಮಾತಿಗೆ ನಕ್ಕ ವಿಧು ಅಯ್ಯೋ ಸುಮ್ಮನೆ ಹೇಳಿದೆ ಮಾರಾಯ ಎಂದ. ನಾನು ಹೌದು ಅಂದುಕೊಂಡೆ ಇಷ್ಟು ದೊಡ್ಡದಾದ ಬ್ಯಾಗನ್ನು ಹಾಕಿಕೊಂಡು ಯಾರು ಹೆಣ್ಣನ್ನು ನೋಡಲು ಬರುತ್ತಾರೆ ಎಂದು ? ಆದರೂ ನೀನು ತುಂಬಾ ಗಂಭೀರ ವ್ಯಕ್ತಿ ಅಲ್ಲವೇ ಹಾಗಾಗಿ ಇದ್ದರೂ ಇರಬಹುದು ಎಂದು ಅಂದುಕೊಂಡೆ ಎಂದ ನಸುನಕ್ಕ ವಿಧು ಯಾರಾದರೂ ಹೆಣ್ಣು ನೋಡಲು ಹೋಗುವವರು ಒಂಟಿಯಾಗಿ ಅದು ಮಣಬಾರದ ಬ್ಯಾಗಿನೊಂದಿಗೆ ಬರುವುದುಂಟಾ ?  ಎಂದು ಹೇಳುತ್ತಾ ಸರಿ ಬಿಡು ಮತ್ತೆ ಏನು ಸಮಾಚಾರ ಎಂದು ಕೇಳಿದ. ಅದಕ್ಕೆ ಅನಿಕೇತ್ ನನ್ನದೇನು ಇಲ್ಲ ಎಲ್ಲಾ ನೀನೆ ಹೇಳಬೇಕು ಬೆಂಗಳೂರು ಹುಡುಗ ಎಂದು ಮಾತು ಮುಂದುವರಿಸಿದ. ಅನಿಕೇತ್ ನಾನೇನು ನಮ್ಮ ಊರಿನಲ್ಲಿ ಬಂದು ಸೆಟಲ್ ಆಗಿದ್ದೀನಿ. ನೀನು ಇನ್ನೂ ಲೋಕ ಸಂಚಾರ ಮಾಡಿಕೊಂಡು ಇದ್ದಿಯೋ ಅಥವಾ ಎಲ್ಲಾದರೂ ಒಂದು ಕಡೆ ಬದುಕು ಕಟ್ಟಿ ಕೊಂಡಿದ್ದೀಯಾ ? ಎಂದು ಕೇಳಿದ.  ವಿಧುವಿನ ನಗುವನ್ನು ನೋಡಿದ ಕೂಡಲೇ ಅದರಲ್ಲೂ ವಿಧವಿನ ಮುಗುಳು ನಗುವಿನ ಹಿಂದೆ ನೂರಾರು ಅರ್ಥವನ್ನು ಹುಡುಕುವ ಅನಿಕೇತ್ ಇನ್ನೂ ಒಂದು ಕಡೆ ನೆಲೆ ನಿಂತಿಲ್ಲ ಅನಿಸುತ್ತಿದೆ ಎಂದು ನೇರವಾಗಿ ಹೇಳಿದ. ವಿಧು ತನ್ನ ನಗುವಿನೊಂದಿಗೆ ಇಲ್ಲ ಬೆಂಗಳೂರಿನಲ್ಲಿ ಇವಾಗ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಕೂಡಲೇ ಮಾತು ತಡೆದ ಅನಿಕೇತ್ ನಿಲ್ಲು ! ನಿಜವಾಗಲೂ ಯಾವಾಗಲೂ ನೋಡಿದರೆ ದೇಶ ದೇಶ ಎಂದು ಊರೂರು ಸುತ್ತುವ ನೀನು ಸ್ವಂತ ಉದ್ಯೋಗ ಮಾಡುತ್ತಿದ್ದೀಯಾ ಎಂದರೆ ನಂಬಲು ಕಷ್ಟವಾಗುತ್ತಿದೆ .
           ನೀನು ಇಂತಹ ನಿರ್ಧಾರಕ್ಕೆ ಬಂದಿದ್ದೀಯಾ ಎಂದರೆ ಎಲ್ಲೋ ಪ್ರೀತಿಯಲ್ಲಿ ಬಿದ್ದಿರಬೇಕು ಮದುವೆಯ ಬಗ್ಗೆ ವಿಚಾರ ಮಾಡಿರಬೇಕು ಹಾಗಾಗಿ ಒಂದು ಕಡೆ ನೆಲೆ ನಿಂತಿರುವೆ ! ನೀನು ಎಂದು  ಅನುಮಾನದಿಂದ ಕೇಳಿದ ಇನ್ನೇನು ಇದು ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮಾತು ಮುಂದುವರಿಸಿದ ಅನಿಕೇತ್ ನಾವು ಎಲ್ಲರೂ ಪ್ರೀತಿಯಲ್ಲಿ ಬಿದ್ದರೂ ನೀನು ಮಾತ್ರ ಯಾರನ್ನು ಪ್ರೀತಿಸುವ ಮನಸ್ಸು ಮಾಡಲಿಲ್ಲ ಎಂದ. ವಿಧು ಮಾತು ಮುಂದುವರಿಸುತ್ತಾ ಪ್ರೀತಿ ಮನಸ್ಸಿನಿಂದ ಬರಬೇಕು. ಅದು ಬೇರೆಯವರು ಪ್ರೀತಿಸಿದರೆಂದು ನಾವು ಪ್ರೀತಿಸಲು ಶುರು ಮಾಡಿದರೆ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ? ಏಕೆ ! ನಾನು ಪ್ರೀತಿಸುತ್ತಿದ್ದೇನೆ ನಾನು ನನ್ನ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಇನ್ನು ಏನು ಆಗಬೇಕು ಎಂಬ ಪ್ರಶ್ನೆಗೆ ಅನಿಕೇತ್ ವಿಧು ನೀನು ಹೇಳುವುದು ಸತ್ಯ ಆದರೆ....
Author : Rakesh Bhagiratha.

Monday, July 13, 2020

ಪ್ರೇಮದ ಅನ್ವೇಷಣೆ ಭಾಗ-6

ಈ ಜನ್ಮದಲ್ಲಿ ಮದುವೆಯಾಗಬಾರದೆಂದು ನಿಶ್ಚಯಿಸಿದಕ್ಕೆ ಪ್ರತಿಯಾಗಿ ಇವರು ಮದುವೆಯ ಪ್ರವಚನ ಮಾಡುತ್ತಿದ್ದಾರಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳುವಷ್ಟರಲ್ಲಿ ಚಿದಾನಂದ ಅವರು ಈ ರೀತಿ ಮಗನ ವಯಸ್ಸಿನ ಮಕ್ಕಳನ್ನು ಕಂಡರೆ ಮದುವೆ ಬಗ್ಗೆ ಮಾತನಾಡುತ್ತಾಳೆ ಎಂದರು. ಇವರನ್ನು ಹೀಗೆ ಬಿಟ್ಟರೆ ಬರೀ ಮದುವೆಯ ಬಗ್ಗೆ ಮಾತನಾಡುತ್ತಾರೆ ಎಂದು ಗೊತ್ತಾದ ಕೂಡಲೇ ಅವರ ಚಿತ್ತವನ್ನು ಪ್ರಕೃತಿಯ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಯೋಚಿಸುತ್ತಿರಬೇಕಾದರೆ ರೈಲು ಅರಸೀಕೆರೆ ನಿಲ್ದಾಣ ತಲುಪಿತ್ತು. ಅರಸೀಕೆರೆ ನಿಲ್ದಾಣ ಜಂಕ್ಷನ್ ಆಗಿರುವುದರಿಂದ ರೈಲು ಸ್ವಲ್ಪ ಸಮಯ ಅಲ್ಲಿ ನಿಲ್ಲುತ್ತದೆ ಎಂದು ತಿಳಿದು ವಿಧು ರೈಲಿನಿಂದ ಕೆಳಗೆ ಇಳಿದು ಸ್ವಲ್ಪ ಸಮಯ ಅತ್ತಿಂದಿತ್ತಾ ಓಡಾಡಿದ, ರೈಲಿನಲ್ಲಿ ಅರಸೀಕೆರೆ ಮಾರ್ಗ ಸಂಚರಿಸುವಾಗ ಯಾವಾಗಲೂ ಬಾದಾಮಿಹಾಲನ್ನು  ಕುಡಿಯುತ್ತಿದ್ದ. ಅದರಂತೆ ಈ ಬಾರಿಯೂ ಹಾಲನ್ನು ತೆಗೆದುಕೊಂಡು ಕುಡಿಯುತ್ತಿರುವಾಗ ಹೊಸದಾಗಿ ಮದುವೆಯಾದ ನವ ಜೋಡಿ ನೋಡಿ ಅವನಿಗೆ ನಗು ಬಂತು. ಕುರಿ ಹಳ್ಳಕ್ಕೆ ಬಿದ್ದಿದೆ ಎಂದು ಮನಸ್ಸಿನಲ್ಲೇ ನಕ್ಕು ಮುಂದೆ ಹೆಜ್ಜೆ ಹಾಕಿದ. ಇನ್ನೇನು ರೈಲುಗಾಡಿಯ ಒಳಗೆ ಬರಬೇಕು, ಅಷ್ಟರಲ್ಲಿ ಸಾಧುಗಳ ದರ್ಶನವಾಯಿತು. ಸಾಧುಗಳ ಕಣ್ಣಿನಲ್ಲಿ ಪ್ರಕಾಶಮಾನವಾದ ತೇಜಸ್ಸು ಕಂಗೊಳಿಸುತ್ತಿತ್ತು. ಸಾಧುಗಳು ವಿಧುವನ್ನು ಹತ್ತಿರ ಬರುವಂತೆ ಕೈಸನ್ನೆ ಮಾಡಿದರು. ಅವರ ಬಳಿ ಹೋಗುತ್ತಿದ್ದಂತೆ  ನೋಡಿ ನಕ್ಕು ನಿನ್ನ ಮುಂದಿನ ಕಾರ್ಯಕ್ಕೆ ಶುಭವಾಗಲಿ, ಬದಲಾವಣೆಗೆ ಸಿದ್ಧನಾಗು ಎಂದು ಹರಸಿದರು. ಅವರ ಆಶೀರ್ವಾದದ ಮರ್ಮ ಏನೆಂದು ಕೇಳಬೇಕು ಅನ್ನುವಷ್ಟರಲ್ಲಿ ರೈಲುಗಾಡಿ ಹೊರಟಿತು ಕೂಡಲೇ ಸಾಧುಗಳ ಆಶೀರ್ವಾದ ಸ್ವೀಕರಿಸಿದ ವಿಧು ರೈಲುಗಾಡಿಯನ್ನು ಹತ್ತಿದ, ರೈಲು ಗಾಡಿಯು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿತು.
           ಅವರ ಮುಗುಳುನಗು ಹಲವಾರು ಗೂಢಾರ್ಥವನ್ನು ಸೂಚಿಸುತ್ತಿತ್ತು ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ರೈಲಿನಲ್ಲಿ ಕುಳಿತು ತನ್ನದೇ ಆದ ಯೋಚನಾಲಹರಿಯಲ್ಲಿ ಬಿದ್ದ. ಪ್ರತಿಬಾರಿ ಯಾವುದೋ ಒಂದು ಮಹಾಶಕ್ತಿ ತನ್ನ ಬದುಕಿನ ಪಥವನ್ನು ನಿರ್ಧರಿಸುತ್ತದೆ ಎಂದು ಯೋಚಿಸುತ್ತ ಕುಳಿತಿರಬೇಕಾದರೆ ಮತ್ತೆ ಸತ್ಯವತಿ ಅವರ ಮಾತು ಪ್ರಾರಂಭವಾಯಿತು. ಓ ಇವರು ಬಿಟ್ಟರೆ ಇನ್ನು ಮದುವೆ ಪ್ರವಚನ ಹೊಡೆಯುತ್ತಾರೆ ಎಂದವನೇ ನೋಡಿ ಅರಸೀಕೆರೆ ಭಾಗದಲ್ಲಿ ಮಳೆ ಇಲ್ಲದೆ ತೆಂಗಿನ ಮರಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಾಕಿದ ಅಡಿಕೆ ಮರಗಳು ಒಣಗುತ್ತಿವೆ ಅಲ್ಲವೇ ? ಎಂದು ಈ ಬಾರಿ ಅವರ ಗಮನವನ್ನು ಪ್ರಕೃತಿಯ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದ. ಹೌದಪ್ಪ ಮಳೆಗಾಲ ಚೆನ್ನಾಗಿ ನಡೆಸುತ್ತಿಲ್ಲ ಎಂದು ತಮ್ಮ ಹಿಂದಿನ ಅನುಭವದ ಮಾತುಗಳನ್ನು ಮತ್ತೆ ತೆಗೆದರು ಅಬ್ಬ ಒಂದು ಮದುವೆಯ ಪ್ರವಚನಕ್ಕೆ ಬ್ರೇಕ್ ಬಿತ್ತಲ್ಲ ಎಂದು ಮನಸ್ಸಿನಲ್ಲೇ ಸಂತೋಷಗೊಂಡ.
              ಸತ್ಯವತಿಯವರು ತಮ್ಮ ಬದುಕು ಕಟ್ಟಿಕೊಂಡ ರೀತಿಯನ್ನು ವಿವರಿಸ ತೊಡಗಿದರು. ಅದನ್ನು ಕೇಳುವ ಹೊತ್ತಿಗೆ ರೈಲು ಕಡೂರು ನಿಲ್ದಾಣವನ್ನು ತಲುಪಿತು. ಅಬ್ಬ ಇವರ ಜೊತೆಗೆ ಅರ್ಧದಾರಿ ಕ್ರಮಿಸುವ ಹೊತ್ತಿಗೆ ರೈಲಿನಿಂದ ಇಳಿಯುತ್ತಿರುವುದು ಸರಿಹೋಯಿತು. ಇಲ್ಲವೆಂದರೆ ಇವರು ಹತ್ತಿರ ಮದುವೆ ವಿಚಾರದಲ್ಲಿ ಮೊಳೆಯನ್ನು ಇನ್ನು ಹೊಡೆಸಿ ಕೊಳ್ಳಬೇಕಾಗಿತ್ತು ಎಂದು ಮನಸ್ಸಿನಲ್ಲಿ ಅಂದುಕೊಂಡ. ಅಮ್ಮ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಸ್ವಲ್ಪ ಜಾಗವನ್ನು ಕೊಡಿ ನಾನು ನನ್ನ ಬ್ಯಾಗುಗಳನ್ನು ತೆಗೆದುಕೊಳ್ಳಬೇಕು ಎಂದು ಎದ್ದುನಿಂತ, ಕೂಡಲೇ ಸತ್ಯವತಿಯವರು ಅಜ್ಜಂಪುರದಲ್ಲಿ ಇಳಿಯುತ್ತೇನೆ ಎಂದು ಇಲ್ಲೇ ಇಳಿಯುತ್ತಿದ್ದಿಯಲ್ಲ ಎಂದರು. ಇಲ್ಲಮ್ಮ ನನ್ನ ಸ್ವಂತ ಊರು ಅಜ್ಜಂಪುರ ನಾನು ಬೇರೆ ಕಾರ್ಯದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ ಹಾಗಾಗಿ ಇಲ್ಲೇ ಇಳಿಯುತ್ತಿದ್ದೇನೆ ಎಂದು ಹೇಳಿದ. ಓ ಆಯ್ತು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ಬೀರೂರಿನ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬಂದಿತು. ವಿಧು ಮಾತೃಹೃದಯಿ ಸತ್ಯವತಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಿಂದ ಇಳಿದ. ಮನಸ್ಸಿನಲ್ಲಿ ಎಲ್ಲೋ......

Author : Rakesh Bhagiratha.

Sunday, July 5, 2020

ಪ್ರೇಮದ ಅನ್ವೇಷಣೆ ಭಾಗ - 5

ಅಷ್ಟರಲ್ಲೇ ಅವರ ಸೊಸೆ ಹರ್ಷಿತ ಅಣ್ಣ ನೀವು ಯಾವ ಕೆಲಸವನ್ನು ಮಾಡಿಸುತ್ತೀರಾ ಎಂದು ಕೇಳಿದಳು. ಅಯ್ಯೋ ! ಇವರ ಅತ್ತೆಯ ಸರದಿ ಆಯ್ತು ಈವಾಗ ಸೊಸೆಯ ಸರದಿಯಲ್ಲ ಎಂದು ಮನದಲ್ಲೇ ಅಂದುಕೊಂಡ. ನಾವು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುತ್ತೇವೆ ಎಂದು ಹೇಳಿ ಸುಮ್ಮನಾದ. ಹರ್ಷಿತಾ ಮಾತು ಮುಂದುವರೆಸಿ ಹಾಗಾದರೆ ಒಳ್ಳೆಯದೇ ದುಡಿಮೆ ಇದೆ ಮದುವೆ ಆಗಬಹುದಲ್ಲ ಎಂದು ಕೇಳಿದ ಕೂಡಲೇ ವಿಧು ಅಯ್ಯೋ ಇವರೇನು ಹೀಗೆ ಗುರುತು ಪರಿಚಯ ಇಲ್ಲದವರಿಗೆ ಇವರು ಈಗೆಲ್ಲ ಮಾತನಾಡುತ್ತಾರಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅತ್ತೆ ಆಯ್ತು ಸೊಸೆ ಆಯ್ತು ಇವಾಗ ಹುಡುಗಿಯ ಮಾವ ಏನು ಹೇಳುತ್ತಾರೋ ಎಂದುಕೊಳ್ಳುವಷ್ಟರಲ್ಲಿ ಮಾವನ ಮುಖದಲ್ಲಿ ಮುಗುಳ್ನಗೆ ಕಂಡಿತು. ಅಬ್ಭಾ... ಇವರಿಂದ ಮದುವೆ ಪ್ರವಚನ ನಡೆಯಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟು ಉಸಿರು ಎಳೆದುಕೊಳ್ಳುವರೊಳಗಾಗಿ ಅವರ ಮಾತು ಆರಂಭವಾಯಿತು. ಓಹೂ.. ಇನ್ನು ಸುಮ್ಮನಿದ್ದರೆ ಮದುವೆ ಬಗ್ಗೆ ಪ್ರವಚನ ಕೇಳಬೇಕಲ್ಲ ಎಂದುಕೊಂಡು, ಸತ್ಯವತಿಯವರು ಮಾತನಾಡುವ ಭಾವ ಕಂಡ ಕೂಡಲೇ ಅಮ್ಮ ನೋಡಿ ರೈಲುಗಾಡಿಯು ತಿಪಟೂರು ನಿಲ್ದಾಣವನ್ನು ಪ್ರವೇಶಿಸುತ್ತಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದ. 
           ಓಹೋ.. ಹೌದಲ್ಲಪ್ಪ ನೋಡು ಮಾತನಾಡುತ್ತ ಹೋದಂತೆಲ್ಲ ಸಮಯ ಸರಿದು ಹೋಗುವುದು ಗೊತ್ತಾಗುವುದಿಲ್ಲ ಎಂದು ಹೇಳುತ್ತಾ ರೈಲಿನ ಮೇಲಿನ ಬರ್ತ್ ಇಂದ ಒಂದು ಬಾಕ್ಸ್ ಅನ್ನು ತೆಗೆಯಲು ಮುಂದಾದರು. ಅದು ಅಷ್ಟು ಸುಲಭವಾಗಿ ಸಿಗುವಂತಿರಲಿಲ್ಲ ಹಾಗಾಗಿ ವಿಧು ಎದ್ದು ಅವರಿಗೆ ಆ ಬಾಕ್ಸನ್ನು ತೆಗೆದುಕೊಟ್ಟ, ಧನ್ಯವಾದ ಅರ್ಪಿಸಿದ ಅವರು ಅದನ್ನು ತೆಗೆದುಕೊಂಡರು.  ಅದನ್ನು ತೆಗೆದ ಮೇಲೆ ತಮ್ಮ ಕೆಳಗೆ ಇದ್ದ ಬ್ಯಾಗ್ ಇಂದ ಒಂದು ಕವರನ್ನು ತೆಗೆದರು ಅದರಲ್ಲಿದ್ದ ಚಪಾತಿಯನ್ನು ಕೊಡಲು ಬಂದರು. ಅದಕ್ಕೆ ಬೇಡಮ್ಮ ಊಟವನ್ನು ಮುಗಿಸಿ ನಾನು ರೈಲನ್ನು ಹತ್ತಿರುವುದು ಎಂದು ಹೇಳಿದ ಆಗ ಮಧ್ಯಪ್ರವೇಶಿಸಿದ ಸತ್ಯವತಿ ಗಂಡನಾದ ಚಿದಾನಂದ ಅವರು ಏನಪ್ಪಾ ನೀನು, ನಿನ್ನ ವಯಸ್ಸಿನಲ್ಲಿ ನಾನು ದಿನಕ್ಕೆ ನಾಲ್ಕು ಬಾರಿ ಊಟ ಮಾಡುತ್ತಿದ್ದೆ .ತೆಗೆದುಕೋ ಎಂದರು ಅದಕ್ಕೂ ಬೇಡ ಅಣ್ಣ ನಿಮ್ಮ ಕಾಲದಲ್ಲಿ ಎಲ್ಲಾ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದರು ನಿಮ್ಮ ಕಾಲದ ಊಟ ಆರೋಗ್ಯವನ್ನು ವೃದ್ಧಿಸುತ್ತಿತು ಇವಾಗ ಎಸಿಡಿಟಿ ಯನ್ನು ಉಂಟುಮಾಡುತ್ತದೆ, ಎಂದು ತಮಾಷೆ ಮಾಡಿದ. ಅದಕ್ಕೆ ಮುಗುಳ್ನಕ್ಕ ಚಿದಾನಂದ ಅವರು ನೀವು ಈಗಿನ ಕಾಲದ ಹುಡುಗರು ಹಾಗೂ ಹುಡುಗಿಯರು ಡಯಟ್ ಡಯಟ್ ಅಂತ ಚೆನ್ನಾಗಿ ತಿಂದು ಚೆನ್ನಾಗಿ ಇರುವುದಿಲ್ಲ. ನಮ್ಮ ಕಾಲದ ಊಟನೇ ಬೇರೆ ಎಂದರು ಅದಕ್ಕೊ ಮುಗುಳು ನಕ್ಕು ಸುಮ್ಮನಾದ.
           ಸತ್ಯವತಿಯವರು ಒಂದು ದಾಳಿಂಬೆ ಹಣ್ಣನ್ನು ಕೊಟ್ಟು ಕೊನೆಪಕ್ಷ ಈ ದಾಳಿಂಬೆ ಹಣ್ಣನ್ನು ಆದರೂ ತಿನ್ನು ಎಂದು ಹೇಳಿದರು ಸರಿ ಇನ್ನೇನು ಹಣ್ಣಿನ ಸಿಪ್ಪೆಯನ್ನು ಬಿಡಿಸಿ ತಿನ್ನಬೇಕು ಅನ್ನುವಷ್ಟರಲ್ಲಿ ಮತ್ತೆ ಮದುವೆ ಪ್ರವಚನ ಶುರುವಾಯಿತು. ನೋಡಪ್ಪ ವಿಧು ವಯಸ್ಸಿಗೆ ತಕ್ಕಂತೆ ಮದುವೆಯಾಗಬೇಕು ನೋಡಿ ತೆಳ್ಳಗೆ ಸುಂದರವಾಗಿ ಬೆಳ್ಳಗಿರುವ ಹೆಣ್ಣನ್ನು ನೋಡಿ ಮದುವೆಯಾಗು ಏಕೆಂದರೆ ನೀನು ಸುಂದರವಾಗಿರುವ ಹುಡುಗಿಯನ್ನು ಮದುವೆಯಾದರೆ ಸುಂದರವಾದ ಮಕ್ಕಳು ಹುಟ್ಟುತ್ತಾರೆ. ಇಲ್ಲ ಕಪ್ಪು ಹುಡುಗಿ ಮದುವೆಯಾದರೆ ಹುಟ್ಟುವ ಮಗು ಗಂಡಾದರೆ ಪರವಾಗಿಲ್ಲ ಹೆಣ್ಣಾದರೆ ಮತ್ತೆ ವರದಕ್ಷಿಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ಅವಳಿಗೆ ಮದುವೆ ಮಾಡಬೇಕಾಗುತ್ತದೆ. ಅದಕ್ಕೆ ಇವಾಗಲೇ ಒಳ್ಳೆಯ ಬೆಳ್ಳಗಿನ ಹುಡುಗಿಯನ್ನು ನೋಡಿ ಮದುವೆಯಾದರೆ ಒಳ್ಳೆಯದಲ್ಲವೇ ನೋಡು ನನ್ನ ಸೊಸೆಯನ್ನು ಅದಕ್ಕೆ ಹುಡುಕಿ ಹುಡುಕಿ ಇಂತಹ ಸೊಸೆಯನ್ನು ನನ್ನ ಮಗನಿಗೆ ತಂದಿದ್ದೇನೆ ಎಂದರು. ವಿಧು ಮನಸ್ಸಿನಲ್ಲೇ ಸತ್ಯವತಿ ಬಹಳ ಲೆಕ್ಕಾಚಾರದ ವ್ಯಕ್ತಿತ್ವದ ಅಮ್ಮನವರು ಎಂದುಕೊಂಡ.ಈ ಜನ್ಮದಲ್ಲಿ ನಾನು....
Author : Rakesh Bhagiratha.

Friday, July 3, 2020

ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಲ್ಲಿ ನಿಜವಾದ ಹಿಂದುತ್ವದ ಜೇಂಕಾರ ಯಾವಾಗ ?

ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದಿದ್ದರೂ ಅನ್ಯಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೆ ಅದರ ಸಾಧನೆಯಾಯಿತು. ಮೊದಲ ಬಾರಿಗೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ದಕ್ಷಿಣ ಭಾರತದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷ ಮೊದಲು ಒಳ್ಳೆಯ ಅಧಿಕಾರ ನೀಡುವ ಭರವಸೆಯನ್ನು ನೀಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿತ್ತು. ಅದರ ಬರವಸೆಯನ್ನು ನಂಬಿದ ಜನ ಒಳ್ಳೆಯ ಆಡಳಿತ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 20- 20 ಮ್ಯಾಚ್ ಆಡಿದ ಅಂದಿನ ಜೆಡಿಎಸ್ ಹಾಗೂ ಬಿಜೆಪಿ ಪರಸ್ಪರ ತೆಗಳುವುದರೊಂದಿಗೆ ಆರಂಭವಾಗಿ ಕೊನೆಗೆ ಸರ್ಕಾರ ಪತನದೊಂದಿಗೆ ಅಂತ್ಯವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ಪಕ್ಷಗಳ ಕಾರ್ಯಕರ್ತರ ಪರಿಶ್ರಮ ಜೆಡಿಎಸ್ ಸಂಸ್ಕೃತಿಗೂ ಹಾಗೂ ಬಿಜೆಪಿ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ.
           ಬಿಜೆಪಿಯದ್ದು ಸಿದ್ಧಾಂತಾಧರಿತ ಪಕ್ಷವೆಂದು ಹೇಳಲಾಗುತ್ತಿತ್ತು. ಜೆಡಿಎಸ್ ನದು ಜಾತ್ಯತೀತವೆಂದರೂ ಅಲ್ಲಿ ಜಾತಿಗಳದೇ ಕಾರುಬಾರು. ಬಿಜೆಪಿ ಹಿಂದುತ್ವದ ಆಧಾರದಲ್ಲಿ ಅಧಿಕಾರ ಹಿಡಿಯುವ ಇಚ್ಛೆಯೊಂದಿಗೆ ಇದ್ದು ತನ್ನ ಎರಡನೇ ಅವಧಿಯ ಚುನಾವಣೆ ಪ್ರಚಾರದಲ್ಲಿ ಹಿಂದುತ್ವವನ್ನು ಮರೆಯಿತು. ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡದಿದ್ದೇ ದೊಡ್ಡ ವಿಚಾರವೆಂಬಂತೆ ಬಿಂಬಿಸಿತು. ಕರ್ನಾಟಕದ ಪ್ರಜ್ಞಾವಂತ ಮತದಾರ ಆಗಲೂ ಕೂಡ ಬಿಜೆಪಿಗೆ ಪೂರ್ಣಬಹುಮತ ಕೊಡಲಿಲ್ಲ. ಏಕೆಂದರೆ ಬಿಜೆಪಿ ಅಷ್ಟರಲ್ಲಾಗಲೇ ಹಿಂದುತ್ವದಿಂದ ಜಾತಿಯ ಕಡೆಗೆ ವಾಲಿಯಾಗಿತ್ತು. ಬಿಜೆಪಿಯಲ್ಲೂ ಜಾತಿ ಆಧಾರದ ಮೇಲೆ ಟಿಕೆಟ್ ನೀಡುವ ಸಂಸ್ಕೃತಿ ಆರಂಭವಾಯಿತು. ಪಕ್ಷಕ್ಕಾಗಿ ತ್ಯಾಗಮಾಡಿದ ನಾಯಕರು ಮನೆ ಸೇರುವಂತಾಯಿತು. ಹೊಗಳು ಭಟ್ಟರಿಂದ ಕೂಡಿದ ಮಂದಿಗೆ ಮಣ್ಣೆ ಹಾಕಲು ಬಿಜೆಪಿಯ ದೇವದುರ್ಲಭ ಕಾರ್ಯಕರ್ತರನ್ನು ಬಲಿಕೊಡಲು ಹಿಂದುಮುಂದು ನಾಯಕರು ಯೋಚಿಸಲಿಲ್ಲ. ಸಂಸ್ಕೃತಿ ಸಂಸ್ಕಾರ ಇಲ್ಲದವರ ಪಕ್ಷವಾಗುವತ್ತ ಬಿಜೆಪಿ ತನ್ನ ಕಾರ್ಯವನ್ನು ಶುರು ಮಾಡಿತು. ಮೂಲ ಬಿಜೆಪಿಗರು ಕಾಣೆಯಾಗತೊಡಗಿದರು. ಬಿಜೆಪಿಯ ಒಳಗೆ ಜಾತಿಗಳ ಕಾರುಬಾರು ಶುರುವಾಯಿತು. ದೇಶಕ್ಕಾಗಿ ರಾಜಕಾರಣ ಎಂದು ಹೇಳುತ್ತಾ ಭ್ರಷ್ಟರು ಬಿಜೆಪಿಯನ್ನು ಅಳಲು ಶುರುಮಾಡಿದರು. ಕೊನೆಗೆ ಎಲ್ಲಾ ಪಕ್ಷಗಳಂತೆ ಬಿಜೆಪಿಯು ವಿಶೇಷವಾಗಿ ಕರ್ನಾಟಕದ ಬಿಜೆಪಿ ಅಧಿಕಾರಕ್ಕೆ  ಕೇಂದ್ರೀಕೃತ ಪಕ್ಷವಾಗಿ ಹೊರಹೊಮ್ಮಿತು. ನಿಜವಾದ ಹಿಂದುತ್ವ ತೆರೆಮರೆಗೆ ಸರಿದು ಜಾತಿ ನಾಯಕರು ಬಿಜೆಪಿಯನ್ನು ಅಳಲು ಶುರುಮಾಡಿದರು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ರೋಸಿಹೋದ ಬಿಜೆಪಿಯ ನಿಷ್ಠರು ಸುಮ್ಮನಾದರು.
           ಮೊದಲೇ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡ ಅಧಿಕಾರಕ್ಕೆ ಬರಲು ಸಾಧ್ಯವೇ! ಜಾತಿಗಳ ಪ್ರತಿಷ್ಠೆಯಲ್ಲಿ ಎಲ್ಲಾ ಪಕ್ಷಗಳಂತೆ ಆಗಿ ಬಿಜೆಪಿಯು ಮತ್ತೆ ಅಧಿಕಾರ ಹಿಡಿಯಲು ವಿಫಲವಾಯಿತು. ಹಿಂದುತ್ವದ ಹೆಸರು ಹೇಳಿಕೊಂಡು ಜಾತಿ ರಾಜಕಾರಣ ಮಾಡಿದ ಪಕ್ಷದ ನಾಯಕರು ಕೊನೆಗೇ ಪೂರ್ಣಬಹುಮತ ತರುವಲ್ಲಿ ವಿಫಲವಾದರು. ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು. ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಯಿತು. ಜಾತಿ ನಾಯಕರು ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದೆ ಪಕ್ಷಕೇ ಬಹುಮತ ಬರದಿರಲು ಕಾರಣವಾಯಿತು. 
              ಇನ್ನು ತನ್ನ ಮೂರನೇ ಅವಧಿಯನ್ನು ಆಪರೇಷನ್ ಕಮಲದ ಮೂಲಕ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡ ನಾಯಕರಿಗೆ ಬಿಜೆಪಿಯ ಕಾರ್ಯಕರ್ತರು ಬೇಡವಾದರು. ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಲು ಸಹಕಾರವಾಗುವಂತಹ ಗ್ರಾಮ ಪಂಚಾಯಿತಿ ಹಂತದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ನೇಮಿಸುವ ಅವಕಾಶವಿದ್ದರೂ ಪ್ರಜಾಪ್ರಭುತ್ವ-ವಿರೋಧಿ ನಿಲ್ಲುವಾದ ಆಡಳಿತಾಧಿಕಾರಿ ನೇಮಿಸುವ ನಿರ್ಧಾರದೊಂದಿಗೆ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾಮಾನ್ಯ ಕಾರ್ಯಕರ್ತನಿಗೆ ಸಮಾಧಿ ಮಾಡಲಾಯಿತು. ವಂಶಪಾರಂಪರ್ಯ ರಾಜಕಾರಣ ಬಿಜೆಪಿಯಲ್ಲಿ ಶುರುವಾಗಿ ಬಹಳ ಕಾಲವಾಗಿದೆ. ದೇವದುರ್ಲಭ ಕಾರ್ಯಕರ್ತರನ್ನು ಕಳೆದುಕೊಂಡು ಬಿಜೆಪಿ ಬಡವಾಗುತ್ತಿದೆ . ಸಂಸ್ಕಾರ-ಸಂಸ್ಕೃತಿ ಇಲ್ಲದ ಜನರು ಬಿಜೆಪಿಯನ್ನು ಆಳುತ್ತಿದ್ದಾರೆ. ಅದೇ ರೀತಿ ಮುಂದುವರೆದಿದ್ದು ಆದರೆ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯೊಂದು ಉದಯ ಆಗುವುದರಲ್ಲಿ ಸಂಶಯವೇ ಬೇಡ. ಈಗಲಾದರೂ ಬಿಜೆಪಿ ತನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ. ಇಲ್ಲವಾದರೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ.
Author : Rakesh Bhagiratha.

Monday, June 29, 2020

ಭಾರತ ತನ್ನ ಇತಿಹಾಸದಲ್ಲಿ ಕಳೆದುಕೊಂಡ ಹಾಗೂ ಕಳೆದುಕೊಳ್ಳುತ್ತಿರುವ ಭೂಭಾಗವೆಷ್ಟು

              ಭಾರತ ಹೆಸರೇ ಹೇಳುವಂತೆ ತನ್ನ ಇತಿಹಾಸದಲ್ಲಿ ವಿಶ್ವದ ಮಾರ್ಗದರ್ಶನದ ಭಾರವನ್ನು ತನ್ನ ಮೇಲೆ ಹಾಕಿಕೊಂಡು ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ದೇಶ. ಆದರೆ ಇಂದು ತನ್ನತನದ ಉಳಿವಿಗಾಗಿ ಹೋರಾಟ ಮಾಡುವಂತಹ ಹಂತಕ್ಕೆ ಬಂದು ತಲುಪಿದೆ. ಅದಕ್ಕೆ ಕಾರಣ ಭಾರತ ತನ್ನ ಸಂಸ್ಕೃತಿ-ಪರಂಪರೆಯನ್ನು ಕಳೆದುಕೊಂಡಿದ್ದು ಎಂದರೆ ಅತಿಶಯೋಕ್ತಿಯೇನಲ್ಲ. ಅದರ ಪರಿಣಾಮವೇ ಇಂದು ತನ್ನ ಭೂಭಾಗವನ್ನು ಕಳೆದುಕೊಳ್ಳುತ್ತಾ ಕಿರಿದಾಗುತ್ತಾ ವಿಶ್ವದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ವಿಶ್ವಕ್ಕೆ ಬೆಳಕಿನ ದೀವಟಿಗೆ ಹಿಡಿದ ದೇಶ ಇಂದು ತಾನೇ ಕತ್ತಲಲ್ಲಿ ಮುಳುಗಿರುವುದು.
     ಭಾರತ ದೇಶವು ಮತ್ತೆ ಮೇಲೇಳಲು ತನ್ನ ಸ್ವಂತಿಕೆಯನ್ನು ಮತ್ತೆ ಪ್ರತಿಬಿಂಬಿಸಬೇಕು ಇಲ್ಲದಿದ್ದರೆ ಮಾರ್ಗದರ್ಶನ ಮಾಡಲು ಹೇಗೆ ಸಾಧ್ಯವಾದೀತು ? ಅದು ತನ್ನ ಸ್ವಂತಿಕೆಯನ್ನು ಕಳೆದುಕೊಂಡ ಫಲವೇ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳುತ್ತಾ ಕಿರಿದಾಗಿದ್ದು. ಹಲವಾರು ಶತಮಾನಗಳ ನಂತರ ಇಂದು ಅದು ತನ್ನ ಸ್ವಂತಿಕೆಯನ್ನು ಮತ್ತೆ ಜಾಗೃತಗೊಳಿಸಹೊರಟಿದೆ. ಅದರಿಂದ ವಿಚಲಿತಗೊಂಡ ಅನ್ಯ ದೇಶದಿಂದ ಬಂದು ನಮ್ಮ ದೇಶವನ್ನು ಆಳಿದವರು ಇಂದು ದೇಶಿಯ ಆಡಳಿತದ ವಿರುದ್ಧವಾದ ನಿಲುವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿರುವುದು.
           ಭಾರತವನ್ನು ಆರ್ಯವ್ರತ ಎಂದು ಕರೆಯಲಾಗುತ್ತಿತ್ತು. ಆರ್ಯ ಎಂದರೆ ಜ್ಞಾನಿ ಎಂಬರ್ಥ ಬರುತ್ತದೆ. ಹಿಂದಿನ ದಿನಮಾನಗಳಲ್ಲಿ ಜ್ಞಾನಿಯನ್ನು ಆರ್ಯನೆoದು  ಕರೆಯಲಾಗುತ್ತಿತು. ಆದರೆ ತಕ್ಕಮಿದಿತ ಇತಿಹಾಸಕಾರರು ಆರ್ಯ-ದ್ರಾವಿಡ ಎಂಬ ಅವರ ದೂರ ಆಲೋಚನೆಯ  ( ದುರಾಲೋಚನೆಯ ) ಕಲ್ಪನೆಯನ್ನು ಕೊಟ್ಟು ( ಅವರ ಉದ್ದೇಶ ಸ್ಪಷ್ಟ ಭಾರತದಲ್ಲಿ ಒಗ್ಗಟ್ಟು ಇದ್ದರೆ ತಾವು ಭಾರತೀಯರನ್ನು ಆಳುವುದು ಕಷ್ಟವೆಂಬುದು ಅವರಿಗೆ ಗೊತ್ತು ) ಅದೇ ಸತ್ಯವೆಂದು ನಂಬಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು. ಇಂತಹ ದುಷ್ಟರ ಕರಾಮತ್ತಿನ ಫಲವೇ ಇಂದು ನಮ್ಮ ಸೈನಿಕರು ದೇಶ ರಕ್ಷಣೆಯಲ್ಲಿ ಸಾವಿಗೀಡಾಗುತ್ತಿದ್ದರು. ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಬದುಕುತ್ತಿರುವ ಕಾಕಾಗಳು ( ಕಾ - Congress ಕಾ - Communist ) ಬುದ್ಧಿಜೀವಿಗಳು ಪ್ರಗತಿಪರರು ಎನಿಸಿಕೊಂಡವರು ಬಾಯಿಗೆ ಬಂದಂತೆ ಹರಟೆ ಹೊಡೆಯುತ್ತಾ ಬಾಯಿ ಚಪಲಕ್ಕೆ ದೇಶದ ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಾ ಸುಖವಾಗಿ ನಮ್ಮ ದೇಶದಲ್ಲಿ ಬದುಕುತ್ತಿರುವುದು ಈ ದೇಶದ ದುರಂತ. ಈ ದೇಶಭ್ರಷ್ಟ ಜನರಿಂದ ಈಗಾಗಲೇ ನಾವು ಭಾರತದ ಹಲವಾರು ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಅವರು ನೇರವಾಗಿ ಅಲ್ಲದಿದ್ದರೂ ದೇಶ ವಿರೋಧಿಗಳ್ಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಸೃಷ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
        ಇನ್ನು ನಾವು ಕಾಲಕ್ರಮದಲ್ಲಿ ಕಳೆದುಕೊಂಡ  ಭೂಪ್ರದೇಶಗಳು ಇಂದು ಹಲವಾರು ದೇಶಗಳಾಗಿ ನಮ್ಮ ದೇಶಕ್ಕೆ ಕಂಟಕವಾಗಿ ಕಾಡುತ್ತಿವೆ. ಆ ದೇಶಗಳಲ್ಲಿ ಈ ಪರಿಯ ಬದಲಾವಣೆ ಏಕಾಯಿತು ಎಂದು ವಿಮರ್ಶಿಸುತ್ತ ಹೋದರೆ ನಮಗೆ ತಿಳಿಯುವುದು ನಮ್ಮ ಸಂಸ್ಕೃತಿಯನ್ನು ಮರೆತು ಅನ್ಯರ ಕ್ರೌರ್ಯ ಪರಂಪರೆಯನ್ನು ರೂಢಿಸಿಕೊಂಡಿದ್ದರ ಫಲವಾಗಿ ಆ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ. ಹೀಗೆ ಹಲವಾರು ದೇಶಗಳನ್ನು ನಾವು ಕಾಣಬಹುದು. ಭಾರತದ ಭೂ ಪ್ರದೇಶದಿಂದ ಉದಯಿಸಿದ ದೇಶಗಳು ಈ ಕೆಳಗಿನಂತಿವೆ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಕಾಂಬೋಡಿಯಾ, ಶ್ರೀಲಂಕಾ ಟಿಬೆಟ್, ಥೈಲ್ಯಾಂಡ್, ವಿಯೆಟ್ನಾಮ್, ಮಯನ್ಮಾರ್ ಲಾವೊಸ್, ಭೂತಾನ್ ಮಾಲ್ಟ್ ಮಲ್ದವಿಸ್. ಹೀಗೆ ಹಲವಾರು ದೇಶಗಳಾಗಿ ಹಂತಹಂತವಾಗಿ ಭೂ ಪ್ರದೇಶವನ್ನು ಕಳೆದುಕೊಂಡಿತು ಭಾರತ. 1739 ರಲ್ಲಿ ಅಫ್ಘಾನಿಸ್ತಾನ ಬೇರ್ಪಟ್ಟಿತು. 1936 ರವರೆಗೆ ಮಯನ್ಮಾರ್ ಭಾರತದ ಅವಿಭಾಜ್ಯ ಅಂಗವೇ ಆಗಿತ್ತು. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು.1948 ಫೆಬ್ರವರಿ ನಾಲ್ಕರಂದು ಶ್ರೀಲಂಕಾ ಬೇರೆ ದೇಶವಾಯಿತು.  1947 ರ ಆಗಸ್ಟ್ 14ರಂದು ಪಾಕಿಸ್ತಾನವೆಂಬ ಧರ್ಮಾಧಾರಿತ ದೇಶದ ಉಗಮವಾಯಿತು. ಪಶ್ಚಿಮ ಪಾಕಿಸ್ತಾನವು 1971 ರ ಬಾಂಗ್ಲಾದೇಶ ಲಿಬೇರೇಷನ್ ವಾರ್ ಇಂದ ಬಾಂಗ್ಲಾದೇಶ ಅಧಿಕೃತವಾಗಿ ಸ್ವಾತಂತ್ರ್ಯ ದೇಶವಾಯಿತು. ಹೀಗೆ ನಮ್ಮ ಭೂಭಾಗವು ಹಲವು ದೇಶಗಳಾಗಿ ಹರಿದುಹಂಚಿ ಹೋಯಿತು. ಅದರ ಮುಂದುವರೆದ ಭಾಗವೇ ಕಾಶ್ಮೀರದ ವಿಚಾರ, ಕಾಶ್ಮೀರ ಭಾರತದ ಆಯಕಟ್ಟಿನ ಪ್ರದೇಶ. 1947 ರ ಭಾರತ-ಪಾಕ್ ವಿಭಜನೆಯ ನಂತರ ಕಾಶ್ಮೀರದಲ್ಲಿನ ರಾಜ ಹರಿಸಿಂಗ್  ಭಾರತದ ಒಕ್ಕೂಟಕ್ಕೆ ಸೇರುವುದೂ ಅಥವಾ ಪಾಕಿಸ್ತಾನಕ್ಕೆ ಸೇರುವುದೂ ಎಂಬ ಜಿಜ್ಞಾಸೆ ಉಂಟಾಯಿತು. ಮೊದಲು ಸ್ವಾತಂತ್ರವಾಗಿ ಉಳಿಯಲು ನಿರ್ಧರಿಸಿದ ರಾಜ. ಪಾಕ್ ಆಕ್ರಮಣಕ್ಕೆ ಹೆದರಿ ಭಾರತದ ಒಕ್ಕೂಟದ ಒಳಗೆ ಸೇರಲು ಒಪ್ಪಿಗೆ ಪತ್ರವನ್ನು ಭಾರತ ಸರ್ಕಾರಕ್ಕೆ ಕಳಿಸಿದ. ಅಷ್ಟರಲ್ಲಾಗಲೇ ರಾಜ ಹರಿಸಿಂಗ್ ಸೈನ್ಯದಲ್ಲಿದ್ದ ಹೆಚ್ಚಿನ ಮುಸಲ್ಮಾನರು ಪಾಕಿಸ್ತಾನದ ಪರವಾಗಿ ನಿಂತು ಪಾಕಿಸ್ತಾನದ ಸೇನೆಯೊಂದಿಗೆ ಕೈಜೋಡಿಸಿದರು. ಆದರೆ ಅದಾಗಲೇ ಕಾಶ್ಮೀರವು ಭಾರತದ ಒಕ್ಕೂಟಕ್ಕೆ ಸೇರಿಯಾಗಿತ್ತು.ಆದರೂ ಪಾಕ್ ತನ್ನ ಸೇನೆಯನ್ನು ಕಾಶ್ಮೀರಕ್ಕೆ ನುಗ್ಗಿಸಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನದೆಂದು ಹೇಳಲಾರಂಭಿಸಿತ್ತು. ಅದನ್ನೇ ಇಂದು ನಾವು ಪಿಓಕೆ ಎಂದು ಕರೆಯುವುದು. ಭಾರತದ ಅಂದಿನ ದುರ್ಬಲ ನಾಯಕತ್ವ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಲು ವಿಫಲವಾಯಿತು. ಅದರಲ್ಲಿ ಗಾಂಧೀಜಿಯವರ ಕೊಡುಗೆಯೂ ಇದೆ ಎಂಬ ಶಂಕೆ, ಸಾರ್ವಜನಿಕ ಅಭಿಪ್ರಾಯ ವಲಯದಲ್ಲಿ ಇಂದಿಗೂ ಕೇಳಿಬರುತ್ತಿದೆ. ಅದೇ ಕಾರಣ ಹಾಗೂ ಧರ್ಮದ ಆಧಾರದ ಮೇಲೆ ದೇಶ ಒಡೆದಿದ್ದರು ಗಾಂಧೀಜಿ ಅವರ ಮುಸಲ್ಮಾನ ಪರವಾದ ಧೋರಣೆ ಅವರ ಸಾವಿಗೆ ಕಾರಣವಾಗಿದ್ದು ಎಂಬ ನಿಲುವನ್ನು ಇಂದಿಗೂ ಹಲವಾರು ಸಂಘಟನೆಗಳು ಹೇಳಿಕೊಂಡು ಬರುತ್ತಿವೆ. ಇದೆಲ್ಲ ಗೊತ್ತಾಗಬೇಕಾದರೆ ಗಾಂಧೀಜಿ ಅವರ ಸಾವಿನ ರಹಸ್ಯ ಹೊರಬರಬೇಕು ಆದರೆ ಅದು ಸಾಧ್ಯವಾಗಲಿಲ್ಲ.
      ಇನ್ನು ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಹೊಸ ರಾಷ್ಟ್ರವಾಗಿ ಹೊರಹೊಮ್ಮುವ ಸಮಯದಲ್ಲಿ ಸಿಗದ ಬಲಿಷ್ಠ ನಾಯಕತ್ವ ಸ್ವಾತಂತ್ರ್ಯ ಬಂದ ನಂತರವೂ ಕೂಡ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳಲು ಕಾರಣವಾಯಿತು. 1962 ರಲ್ಲಿ ಭಾರತದ ಬೆನ್ನಿಗೆ ಚೂರಿ ಇರಿಯುವಂತಹ ಕೆಲಸವನ್ನು ಕಮ್ಯುನಿಸ್ಟ್ ಚೀನಾ ಮಾಡಿತು. 1962 ರಲ್ಲಿ ಭಾರತದ ಮೇಲೆ ಯುದ್ಧ ಸಾರಿದ ಚೀನಾ ಹಲವಾರು ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಅದು ಇಂದಿಗೂ ಕೂಡ ಚೀನಾ ವಶದಲ್ಲಿದೆ ಅದನ್ನೇ ನಾವು COK-1 ಎಂದು ಕರೆಯುತ್ತೇವೆ. ಮತ್ತೆ ಮುಂದುವರೆದ ಚೀನಾ ತನ್ನ ಸಿಲ್ಕ್ ರೋಡ್ ಯೋಜನೆಗೆ ಅಕ್ರಮವಾಗಿ ಪಾಕಿಸ್ತಾನ ಭಾರತದಿಂದ ವಶಪಡಿಸಿಕೊಂಡ ಜಾಗವನ್ನು 99 ವರ್ಷಗಳಿಗೆ ಲೀಸ್ ಗೆ ತೆಗೆದುಕೊಂಡಿದೆ, ಹೀಗೆ ಹಲವಾರು ಭೂ ಭಾಗಗಳನ್ನು ಕಳೆದುಕೊಳ್ಳುತ್ತ ಭಾರತ ಕ್ಷೀಣಿಸುತ್ತಿದೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ  ಮಂದಿ ಭಾರತದ ಅನ್ನ ತಿಂದು ದೇಶದ್ರೋಹಿಗಳಾದ ಕಮ್ಯುನಿಸ್ಟರನ್ನು ಆಲಂಗಿಸುತ್ತಿದ್ದಾರೆ. "ಇಷ್ಟೆಲ್ಲ ಆದ್ರೂ ನಾವು ಏನೂ ಮಾಡದೇ ಹೋದ್ರೆ ಇನ್ನೂ ಅದೆಸ್ಟೋ  ಕಳಕೊಂಡು... ಕೊನೆಗೆ ಉಳಿದ್ದಿದು ಇಷ್ಟೇ ಅಂತ ಕೊರಗೋ ಪರಿಸ್ಗಿತಿ ಬೇಕಾ...?" ನೀವೇ ಯೋಚಿಸಿ, ದೇಶದ ಏಕತೆಗೆ ಕಾರ್ಯಪ್ರವೃತ್ತರಾಗಿ. ದೇಶದ ಅಖಂಡತೆ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಲಿ. ಭಾರತಮಾತೆ ವಿಶ್ವವನ್ನು ಬೆಳಗಲಿ.
ಭಾರತದ ಈಗಿನ ಆಡಳಿತದ ನಕ್ಷೆ.

Author : Rakesh Bhagiratha.

Sunday, June 28, 2020

ಪ್ರೇಮದ ಅನ್ವೇಷಣೆ. ಭಾಗ-4

      ಈಕೆಯ ಹೆಸರು ಹರ್ಷಿತ. ಎಂದು ಹೇಳುತ್ತಾ ಅವರ ಮಾತು ಮುಂದುವರೆಯಿತು. ಕೆಲವು ವರ್ಷಗಳಿಂದ ಪ್ರಯಾಣದಲ್ಲಿ ಮೌನವಾಗಿ ಪ್ರಯಾಣಿಸುತ್ತಿದ್ದ ,ಆದರೆ ಈ ಬಾರಿ ಮಾತನಾಡುವ ಕುಟುಂಬ ಸಿಕ್ಕಿದೆಯಲ್ಲಾ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಸತ್ಯವತಿಯವರು ನೀನು ಏನು ಕೆಲಸ ಮಾಡಿಕೊಂಡಿದ್ದೀಯ ಎಂದು ಕೇಳಿದರು ಉತ್ತರಿಸಬೇಕು ಅನ್ನುವಷ್ಟರಲ್ಲಿ ಸತ್ಯವತಿಯವರ ಯಜಮಾನರಾದ ಚಿದಾನಂದ ಅವರು ಏನು ಪ್ರಶ್ನೆ ಕೇಳುತ್ತೀಯಾ ! ಆ ಹುಡುಗನ ಕೈಯಲ್ಲಿ ಇರುವ ಪುಸ್ತಕವನ್ನು ನೋಡಿದರೆ ತಿಳಿಯುವುದಿಲ್ಲವೆ ಕಾಲೇಜು ವಿದ್ಯಾರ್ಥಿ ಎಂದು ಹೇಳಿದರು. ಇದನ್ನು ಕೇಳಿ ನಸುನಕ್ಕ ವಿಧು ಇಲ್ಲ ನಾನು ಕಾಲೇಜು ವಿದ್ಯಾರ್ಥಿಯಲ್ಲ ನನ್ನ ಕಾಲೇಜಿನ ದಿನಗಳು ಮುಗಿದು ಒಂದು ವರ್ಷವಾಯಿತು ಇದು ಬೇರೆ ಪುಸ್ತಕ ನನಗೆ ಅನ್ಯ ಪುಸ್ತಕಗಳನ್ನು ಓದುವ ಅಭ್ಯಾಸವಿರುವುದರಿಂದ ಪುಸ್ತಕವನ್ನು ಓದುತ್ತಿದ್ದೇನೆ. ಈ ಪುಸ್ತಕದ ಹೆಸರು " ಎಸ್ ವಿ ಕೆನ್ವಿನ್ " ಎಂದು ರಾಬಿನ್ ಶರ್ಮಾ ಅವರು ರಚಿತಾ ಪುಸ್ತಕಗಳನ್ನು ನಾನು ಬಿಡುವಿನ ಸಮಯದಲ್ಲಿ ಓದುತ್ತೇನೆ ಎಂದು ಹೇಳಿದ. 
            ಅಷ್ಟರಲ್ಲೇ ಸತ್ಯವತಿಯವರು ಮಧ್ಯದಲ್ಲಿ ಮತ್ತೊಂದು ಪ್ರಶ್ನೆಯನ್ನು ಎಸೆದರು. ಈ ಮೊದಲು ನಿನ್ನ ಹತ್ತಿರ ಇದ್ದ ಪುಸ್ತಕ ಯಾವುದು ಎಂದು ಕೇಳಿದರು. ಅದಕ್ಕೆ ವಿಧು ಭಾರತೀಯ ಕ್ಷಾತ್ರ ಪರಂಪರೆ ಎನ್ನುವ ಪುಸ್ತಕ. ಈ ಬಾರಿ ಎರಡು ಪುಸ್ತಕಗಳನ್ನು ತಂದಿದ್ದೇನೆ. ಈ ಮೊದಲು ನೀವು ನೋಡಿದ್ದು ಆ ಪುಸ್ತಕ. ನಾನು ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದ ಕೂಡಲೇ, ಹೌದು ಸ್ವಂತ ಉದ್ಯೋಗವೇ ಕೆಲವೊಮ್ಮೆ ಮೇಲು ಅನಿಸುತ್ತದೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿ ಬಂದರೆ ಕಷ್ಟವಾಗುತ್ತದೆ ಎಂದು ಹೇಳಿದರು.  
            ಮದುವೆಯು ವಿಧುವಿಗೆ ಆಸಕ್ತಿ ವಿಷಯ ಅಲ್ಲವಾದ್ದರಿಂದ ಅವರ ಮಾತಿಗೆ ಹೆಚ್ಚಿಗೆ ಗಮನ ಕೊಡದೆ , ಈ ರೀತಿ ಏನು ಇರುವುದಿಲ್ಲ ಅದು ಅವರು ದುಡಿಮೆಗೇ ಹಾಕುವ ಪರಿಶ್ರಮದ ಮೇಲೆ ಇರುತ್ತದೆ. ಎಂದು ಹೇಳಿ ತನ್ನ ಪುಸ್ತಕದ ಕಡೆ ಗಮನ ಹರಿಸತೊಡಗಿದ. ಪುಸ್ತಕದ ಕೆಲವು ಪುಟಗಳನ್ನು ತಿರುವಿ ಹಾಕುವುದರೊಳಗೆ ಆಗಿ ಸತ್ಯವತಿಯವರು ಮತ್ತೆ ಮಾತನಾಡಲು ಶುರು ಮಾಡಿದರು. ಇನ್ನೂ ಮುಂದುವರೆದು ಮಾತನಾಡಿಸುವ ಎಲ್ಲ ಲಕ್ಷಣಗಳನ್ನು ತಿಳಿದ ನಂತರ ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಇಟ್ಟ. ಸತ್ಯವತಿಯವರೇ ಮಾತು ಮುಂದುವರಿಸಿ ನಿನ್ನ ವಯಸ್ಸು ಎಷ್ಟು ಎಂದು ಕೇಳಿದರು. ವಿಧು ಮನಸ್ಸಿನಲ್ಲೇ ಇವರಿಗೆ ಏಕೆ ಈ ಉಸಾಬರಿ ಎಂದು ಅಂದುಕೊಂಡು ಹೇಳಿದ ಇವಾಗ ನನಗೆ 26 ಎಂದು, ಸತ್ಯವತಿಯವರು ಏನಪ್ಪಾ ಇನ್ನೂ ಮದುವೆಯಾಗಿಲ್ಲ ನೀನು ಎಂದು ಕೇಳಿದರು. ಅವರ ಮಾತಿಗೆ ಅವರ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ನಕ್ಕಳು, ವಿಧುವಿಗೆ ಮನಸ್ಸಿನಲ್ಲೇ ಕಸಿವಿಸಿಯಾಯಿತು. ಈ ಮಹಾತಾಯಿ ಏನು ತೀರಾ ಖಾಸಗಿ ವಿಷಯಗಳನ್ನು ಕೇಳುತ್ತಿದ್ದಾರೆ. ಇವರ ಹತ್ತಿರ ಮಾತನಾಡಿದ್ದೆ ತಪ್ಪಾಯ್ತು ಅನಿಸುತ್ತದೆ, ಎಂದುಕೊಳ್ಳುವಷ್ಟರಲ್ಲಿ ಆ ಮಾತೃ ಹೃದಯದ ತಾಯಿ ಮಾತನ್ನು ಮುಂದುವರೆಸುತ್ತಾ ನೋಡಪ್ಪ ನಿನ್ನದು ಮದುವೆಯಾಗುವ ವಯಸ್ಸು ಮೊದಲು ಮದುವೆಯಾಗು, ಬದುಕಿನಲ್ಲಿ ವಯಸ್ಸಿಗೆ ತಕ್ಕಹಾಗೆ ಏನು ಏನು ಮಾಡಬೇಕು ಎಲ್ಲವನ್ನು ಮಾಡಬೇಕು. ಈಗ ನನ್ನ ನನ್ನನ್ನೇ ನೋಡು ನನ್ನ ತಂದೆ ನಮಗೆ 18 ವಯಸ್ಸು ತುಂಬುವುದರೊಳಗೆ ಮದುವೆ ಮಾಡಿದರು. ಈಗ ನಾನು ಕೂಡ ನನ್ನ ಮಗನಿಗೆ 20 ವರ್ಷಕ್ಕೆ ಮದುವೆ ಮಾಡಿದ್ದೀನಿ, ನೋಡು ಈಕೆ ನನ್ನ ಸೊಸೆ ಹರ್ಷಿತಾ ಡಿಗ್ರಿ ಮುಗಿಸಿ ಈಗ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಒಳ್ಳೆಯ ಕಡೆ ಕೆಲಸಕ್ಕೆ ಸೇರಿದ್ದಾನೆ .ಇಬ್ಬರೂ ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ನಾನು ನನ್ನ ಗಂಡ ಇಬ್ಬರೂ ಬೆಂಗಳೂರಿನಲ್ಲಿ ನನ್ನ ಮಗನ ಮನೆಯಲ್ಲಿದ್ದವೇ ನನ್ನ ಯಜಮಾನರು ಕೆಲಸಕ್ಕೆ ಹೋಗುತ್ತಾರೆ. ನಾನು ನನ್ನ ಮನೆಯ ಕೆಲಸವನ್ನೆಲ್ಲ ಮಾಡಿ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ್ತೇನೆ ಎಂದರು. ಅಯ್ಯೋ ನಾನು ಇವರನ್ನು ಮಾತನಾಡಿಸಿದ್ದೆ ತಪ್ಪಾಯ್ತು ಅನಿಸುತ್ತದೆ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಅವರ ಸೊಸೆ ಹರ್ಷಿತಾ......

Author : Rakesh Bhagiratha.

Friday, June 26, 2020

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.


           ಭಾರತದ ಸಂವಿಧಾನ ಆಶಯವನ್ನು ಹಾಗೂ ಗಾಂಧೀಜಿಯವರ ಗ್ರಾಮ ಪರಿಕಲ್ಪನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಇದು ಸಕಾಲವಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 40, ಆರ್ಟಿಕಲ್ 243ಎ ಗ್ರಾಮ ಪಂಚಾಯತಿಗಳ ಸ್ವಾವಲಂಬನೆಯ ಮಹತ್ವವನ್ನು ಸ್ಪಷ್ಟವಾಗಿ ಹೇಳುತ್ತದೆ.
(Article 40 of the constitution which enshrines one of the directive principles of the state policy lays down that the state shall take steps to organize village Panchayath and endow them such powers and authority as may be necessary to enable them to functions as units of self government)
(Article 243 A says can excise powers and perform such)
        ಕಳೆದ ತಿಂಗಳು 24/4/2020 ರಂದು ಪಂಚಾಯತ್ ರಾಜ್ ದಿನವನ್ನು ಆಚರಿಸಿದೆವು. ಪಂಚಾಯತ್ ರಾಜ್ ಪರಿಕಲ್ಪನೆ ಹುಟ್ಟಿದ್ದು 1957 ರಲ್ಲಿ. ಅಂದಿನ ಕೇಂದ್ರ ಸರ್ಕಾರವು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿ ಅನುಭವವಿದ್ದ ಹಾಗೂ ಸಂಸದರಾಗಿದ್ದ ಬಲವಂತರಾಯ್ ಮೆಹ್ತಾ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಮೂರು ಹಂತಗಳ ಚುನಾವಣೆ ವ್ಯವಸ್ಥೆಯ ಪ್ರಸ್ತಾವನೆಯನ್ನು ಮಾಡಿದ್ದು, ಮೊದಲನೇ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ,ಎರಡನೇ ಹಂತದಲ್ಲಿ ( ಬ್ಲಾಕ್ ) ತಾಲೂಕ್ ಪಂಚಾಯಿತಿ,ಮೂರನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಮಾಡಬೇಕೆಂದು ಶಿಫಾರಸು ಮಾಡಿತು. ಆನಂತರ ಹಲವಾರು ಸಮಿತಿಗಳು ಬಂದವು. ಶಾಂತ ನಾಮ್ ಸಮಿತಿ (1963), ಜನತಾ ಸರ್ಕಾರ ನೇಮಿಸಿದ ಅಶೋಕ ಮೆಹತಾ ಸಮಿತಿ (1977)ರಲ್ಲಿ ಜಿ.ವಿ.ಕೆ ರಾವ್ ಸಮಿತಿ (1985), ಎಲ್.ಎಂ. ಸಿಂಗ್ವಿ ಸಮಿತಿ (1986 ), ಹೀಗೆ ಹಲವಾರು ಸಮಿತಿಗಳ ಶಿಫಾರಸ್ಸಿನ ನಂತರ ಇಂದಿನ ಚುನಾವಣೆ ಹಾಗೂ ಆಡಳಿತ ವ್ಯವಸ್ಥೆಯನ್ನು ನಾವು ಗ್ರಾಮಪಂಚಾಯಿತಿಯಲ್ಲಿ ಕಾಣುವಂತಾಯಿತು. ಗ್ರಾಮಪಂಚಾಯಿತಿ ವ್ಯವಸ್ಥೆಯು ಗ್ರಾಮಗಳ ಸಬಲೀಕರಣ ದೃಷ್ಟಿಕೋನದಿಂದ ಹುಟ್ಟಿದ ವ್ಯವಸ್ಥೆ.ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮಗಳು ಸ್ವಾವಲಂಬಿ ಪಥದತ್ತ ಸಾಗಬೇಕು ಎಂಬ ಆಶಯದಿಂದ ಗ್ರಾಮ ಪಂಚಾಯತ್ ಕಾನೂನಿನ ಮೂಲಕ ಗ್ರಾಮಪಂಚಾಯಿತಿಗಳಿಗೆ ಚಾಲನೆ ನೀಡಲಾಯಿತು.
        ಗ್ರಾಮ ಪಂಚಾಯಿತಿಯು ತನ್ನದೇ ಆದ ವ್ಯಾಪ್ತಿಯಲ್ಲಿ ಕೆಲಸವನ್ನು ಮಾಡಬೇಕಾಗುತ್ತದೆ. ಅದಕ್ಕೆ ತನ್ನದೇ ಆದ ಹಲವಾರು ಕರ್ತವ್ಯಗಳಿವೆ. ಗ್ರಾಮ ಪಂಚಾಯಿತಿಯು ಗ್ರಾಮ ಕಂದಾಯವನ್ನು ವಸೂಲಿ ಮಾಡುತ್ತದೆ.ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಅದರ ಮಹತ್ವದ ಜವಾಬ್ದಾರಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾವರಿ ಯೋಜನೆ, ರಸ್ತೆಗಳು, ಚರಂಡಿ ವ್ಯವಸ್ಥೆ, ಶಾಲೆ ಕಟ್ಟಡಗಳ ಕಾಮಗಾರಿ ಮತ್ತು ಸಿ.ಪಿ.ರ್ ನ್ನು ನೋಡಿಕೊಳ್ಳುತ್ತದೆ. ಎಲ್ಲ ಗ್ರಾಮಮಟ್ಟದ ಜಾತಿಗಣತಿ, ಬೆಳೆಯ ಗಣತಿ, ಜಾನುವಾರಗಳ ಗಣತಿ ಜೊತೆಗೆ ಸ್ಥಳೀಯ ಮಟ್ಟದ ಗ್ರಾಮ ದಾಖಲಾತಿಗಳನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಆ ಮಾಹಿತಿಯ ಆಧಾರದ ಮೇಲೆ ಅಲ್ಲಿನ ಅಭಿವೃದ್ಧಿಯ ರೂಪರೇಷೆಯನ್ನು ಸಿದ್ಧಪಡಿಸಿಕೊಂಡು ಉನ್ನತ ಹಂತಕ್ಕೆ ಹಣಕಾಸಿನ ನೆರವು ಕುರಿತು ಪತ್ರ ಬರೆಯುತ್ತದೆ. ಆದರೆ ಹಣಕಾಸನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗ್ರಾಮಪಂಚಾಯಿತಿಗಳು ವಿಫಲವಾಗುತ್ತಿವೆ.
       ಗ್ರಾಮ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಗ್ರಾಮಾಭಿವೃದ್ಧಿ ಕಂಡಂತಹ ಹಲವಾರು ಗ್ರಾಮಗಳು ಇವೆ. ಉದಾಹರಣೆಗೆ ಹೇಳುವುದಾದರೆ ಗುಜರಾತ್ ಇಂದ 90 ಕಿಲೋಮೀಟರ್ ದೂರದಲ್ಲಿರುವ ಆಕೋದರ ಎಂಬ ಗ್ರಾಮವು ಕ್ಯಾಶ್ಲೆಸ್ ಗ್ರಾಮವೆಂದು ಪ್ರಸಿದ್ಧಿಪಡೆದಿದೆ. ಭಾರತದಲ್ಲಿ ಅತಿ ಸಣ್ಣ ವಯಸ್ಸಿನ ಹೆಣ್ಣು ಮಗಳು ಜಯಪುರದಿಂದ 60 ಕಿಲೋಮೀಟರ್ ದೂರದಲ್ಲಿರುವ ಸೋಡಾ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಆಕೆಯ ಹೆಸರು ಚಾವಿ ರಾಜ್ವತ್. ಇಂತಹ ಸಾಧನೆಗಳು ಉತ್ತರ ಭಾರತದ ಹಲವಾರು ಗ್ರಾಮಪಂಚಾಯಿತಿಗಳಿಗೆ ಸಾಧ್ಯವಾಗಿದೆ. ಆದರೆ ದಕ್ಷಿಣ ಭಾರತದ ಯಾವುದೇ ಗ್ರಾಮಪಂಚಾಯಿತಿಗಳು ಕ್ಯಾಶ್ಲೆಸ್ ಅಥವಾ ಹೆಣ್ಣುಮಗಳೊಬ್ಬಳ ಸ್ವಾತಂತ್ರ್ಯ ಆಯ್ಕೆ ಮಾಡುವಲ್ಲಿ ವಿಫಲವಾಗಿವೆ. ದಕ್ಷಿಣ ಭಾರತದ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಗಳೊಬ್ಬಳು ಆಯ್ಕೆಯಾಗಿದ್ದರೂ ಆಕೆ ನಾಮಕಾವಸ್ಥೆಯ ಅಧ್ಯಕ್ಷೆಯಾಗಿ ಮುಂದುವರೆಯುತ್ತಾಳೆ .ಆದರೆ ಆಡಳಿತವೆಲ್ಲವು ಗಂಡನದೇ ಆಗಿರುತ್ತದೆ .ಅದರಲ್ಲೂ ಕರ್ನಾಟಕದ ಚುನಾವಣೆ ವ್ಯವಸ್ಥೆಯು ಜಾತಿ ಕೇಂದ್ರೀಕೃತವಾಗಿರುವುದರಿಂದ ಒಳ್ಳೆಯ ಅಭಿವೃದ್ಧಿ ದೃಷ್ಟಿಕೋನದಿಂದ ಅಭ್ಯರ್ಥಿಯ ಆಯ್ಕೆಯಾಗುವುದು ಬಹಳ ಕಷ್ಟಸಾಧ್ಯ .ವಿದ್ಯಾವಂತರ ಕೊರತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎದ್ದು ಕಾಣುತ್ತದೆ.
        ಗ್ರಾಮ ಪಂಚಾಯಿತಿಯನ್ನು ಶಕ್ತಿಯುತವಾಗಿ ಪರಿವರ್ತಿಸಲು ಇದು ಸಕಾಲ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಐದು ವರ್ಷಗಳು ತುಂಬುತ್ತ ಬಂದಿರುವ ಈ ಸಂದರ್ಭದಲ್ಲಿ ಕೋವಿಡ್ – 19 ಇರುವ ಕಾರಣ ಚುನಾವಣೆ ನಡೆಸುವುದು ಕಷ್ಟಸಾಧ್ಯವಾಗುತ್ತದೆ. ಗ್ರಾಮ ಪಂಚಾಯಿತಿಗೆ ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸರ್ಕಾರವು ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾಜ ಸೇವೆ ಮಾಡಿದವರನ್ನು ಗುರುತಿಸಿ ನೇಮಿಸಬಹುದು. ಹೀಗೆ ಮಾಡುವುದರಿಂದ ಹಣ ಇಲ್ಲದಿದ್ದರೂ ಸಾಮಾಜಿಕ ಕೆಲಸ ಮಾಡುವವರನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.ಇನ್ನು ಸಾಮಾಜಿಕ ನ್ಯಾಯ ಕಾಪಾಡಿಕೊಂಡು ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡುವುದರಿಂದ ಗೊಂದಲಗಳು ಆಗುವುದಿಲ್ಲ .ಇನ್ನು ಲಿಂಗ ತಾರತಮ್ಯಕ್ಕೆ ಅವಕಾಶ ಮಾಡಿಕೊಡದೆ 70:30 ಅನುಪಾತದಲ್ಲಿ ಲಿಂಗ ಸಮಾನತೆಯನ್ನು ಕಾಪಾಡುವುದರಿಂದ ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆ ಬಲವಾಗುತ್ತದೆ. 50% ಯುವಕರಿಗೆ ಅವಕಾಶ ಕೊಡುವುದರಿಂದ ಹಳ್ಳಿಗಳನ್ನು ಡಿಜಿಟಲೀಕರಣ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ವಿದ್ಯಾವಂತ ಯುವಕರನ್ನು ಆಯ್ಕೆ ಮಾಡುವುದರಿಂದ ಹಳ್ಳಿಗಳಲ್ಲಿನ ಸಣ್ಣ ಮನಸ್ಥಿತಿಯ ಜಾತಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ .ಇನ್ನು 30% ಮಹಿಳೆಯರಿಗೆ ಕೊಟ್ಟರೆ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಇನ್ನು 20% ಗ್ರಾಮಗಳಲ್ಲಿ ವಿಶೇಷ ಸಾಧನೆ ಮಾಡಿ ಸಾಮಾಜಿಕ ಬದಲಾವಣೆ ತಂದವರನ್ನು ಗುರುತಿಸಿ ಅವರನ್ನು ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ.
         ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.

ಪ್ರೇಮದ ಅನ್ವೇಷಣೆ ಭಾಗ-3



ಪ್ರೇಮದ ಅನ್ವೇಷಣೆ ಭಾಗ-3





        ನೆತ್ತಿಯ ಮೇಲಿನ ಸೂರ್ಯ ತನ್ನ ಪೂರ್ವದ ಪಯಣವನ್ನು ಮುಗಿಸಿ ಪಶ್ಚಿಮದತ್ತ ತನ್ನ ಪಥವನ್ನು ಆರಂಭಿಸಿದ್ದ. ಬಿಸಿಲಿನ ಝಳ ಕಿಟಕಿಯ ಮುಖಾಂತರ ಒಳಪ್ರವೇಶಿಸಲು, ಬಿಸಿಲಿನ ಝಳ ತಡೆಯುವ ವ್ಯರ್ಥ ಪ್ರಯತ್ನವನ್ನು ಆ ಹುಡುಗಿ ಬಟ್ಟೆ ಹಿಡಿಯುವುದರ ಮುಖಾಂತರ ಮಾಡುತ್ತಿದ್ದಳು. ಆಕೆಯ ವ್ಯರ್ಥ ಪ್ರಯತ್ನಕ್ಕೆ ತೆರೆ ಎಳೆಯುವಂತೆ ಅವರ ತಂದೆ ಕಿಟಕಿಯಲ್ಲಿ ಗಾಳಿ ಬರುವಂತೆ ಕಿಟಕಿಯನ್ನು ಮುಚ್ಚಿದರು. ಆ ಕುಟುಂಬದ ಮಾತು ಮುಂದುವರೆಯುತ್ತಾ ಹೋಯಿತು. ಸಾಮಾನ್ಯವಾಗಿ ರೈಲಿನಲ್ಲಿ ಹಾಗೂ ಬಸ್ಸಿನಲ್ಲಿ ಸಹ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುತ್ತಿದ್ದ ವಿಧು ಈಚಿನ ದಿನಗಳಲ್ಲಿ ಹರಟೆ ಹೊಡೆಯುವುದನ್ನು ನಿಲ್ಲಿಸಿದ್ದ. ನಾವು ಸಮಾಜದ ಬಗ್ಗೆ ಮಾತನಾಡುವುದರಿಂದ ಏನು ಬದಲಾವಣೆ ಮಾಡಲಾಗುವುದಿಲ್ಲ ಎಂಬ ಧೋರಣೆ ಮೌನವಾಗಿ ಪ್ರಯಾಣ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ರೈಲು ಗಾಡಿಯ ವೇಗ ಹೆಚ್ಚಾದಂತೆ ತಂಪಾದ ಗಾಳಿ ಪಕ್ಕದ ಕಿಟಕಿಯಿಂದ ಬೀಸತೊಡಗಿದ್ದರಿಂದ ನಿಧಾನವಾಗಿ ನಿದ್ರೆಯ ಮಂಪರಿಗೆ ಜಾರಿದ. ಹಾಗೆಯೇ ಗಾಢ ನಿದ್ರೆಗೆ ಜಾರುವ ಹೊತ್ತಿಗೆ ಹಿಂದಿನಿಂದ ಟಿಕೆಟ್ ಟಿಕೆಟ್ ಎನ್ನುವ ಶಬ್ದ ಕಿವಿಗೆ ಅಪ್ಪಳಿಸಿತು. ನಿದ್ದೆಯ ಮಂಪರಿನಲ್ಲಿಲ್ಲೇ ಮುಚ್ಚಿದ್ದ ಕಣ್ಣು ಬಿಟ್ಟು ನೋಡಿದಾಗ ಟಿಕೆಟ್ ಚೆಕಿಂಗ್ ಆಫೀಸರ್ ವಿಧುವಿನ ಕಣ್ಣ ಮುಂದೆ ನಿಂತಿದ್ದ.

         ಟಿಕೆಟ್ ಕೇಳಿದ ಕೂಡಲೇ ಟಿಕೆಟ್ ಕೊಡಲು ಜೇಬಿನೊಳಗೆ ಕೈಹಾಕಿದ, ಟಿಕೆಟ್ ಸಿಗದೇ ಹೋಯಿತು. ಅಯ್ಯೋ ಏನು ಮಾಡುವುದು ಇವಾಗ ಟಿಕೆಟ್ ಕೂಂಡೆನಲ್ಲ ಎಂದು ಟಿಕೆಟ್ಗಾಗಿ ತನ್ನ ಕಿಸೆ ಹಾಗೂ ಬ್ಯಾಗನ್ನು ಹುಡುಕಿದರೂ ಟಿಕೆಟ್ ಸಿಗದೇ ಹೋಯಿತು. ಇನ್ನೇನು ದಂಡ ಕಟ್ಟುವುದೇ ಗಟ್ಟಿ ಎಂದುಕೊಳ್ಳುತ್ತಿರುವಾಗಲೇ ಜೇಬಿನಲ್ಲಿದ್ದ ಟಿಕೆಟ್ ಅರಿವಿಗೆ ಬಾರದ ಹಾಗೆ ಕೆಳಗೆ ಬಿದ್ದದ್ದನ್ನು ನೋಡಿದ ಎದುರುಗಡೆ ಕುಳಿತಿದ್ದ ಹುಡುಗಿ ಟಿಕೆಟ್ಟನ್ನು ತೆಗೆದುಕೊಂಡು ವಿಧುವಿನ ಕೈಗೆ ಕೊಟ್ಟಳು. ಅಬ್ಬಾ ಬದುಕಿದೆ! ಇಲ್ಲ ಎಂದರೆ ಈ ಟಿಕೆಟ್ ಚೆಕಿಂಗ್ ಆಫೀಸರುಗಳು ಸಿಕ್ಕಿದಷ್ಟು ಕಬಳಿಸಲು ಯತ್ನಿಸುತ್ತಿದ್ದರು ಎಂದು ಬೇರೆಯವರಿಗೆ ಆದ ಅನುಭವವನ್ನು ನೋಡಿದ್ದ ವಿಧು ಮನಸ್ಸಿನಲ್ಲಿ ನೆನೆಸಿಕೊಂಡು ನಿಟ್ಟಿಸಿರುಬಿಟ್ಟನು. ಆ ತಕ್ಷಣ ವಿಧುವಿನ ಕಣ್ಣಿಗೆ ಹುಡುಗಿ ದೇವತೆಯಂತೆ ಕಂಡಳು.  ಟಿಕೆಟ್ಟನ್ನು ಆಫೀಸರಿಗೆ ತೋರಿಸಿ ಮತ್ತೆ ಜೇಬಿನಲ್ಲಿಟ್ಟುಕೊಳ್ಳುವಾಗ ಮುಗುಳ್ನಕ್ಕಳು. ಅದಕ್ಕೆ ಪ್ರತಿಯಾಗಿ ಇವನು ಕೂಡ ಮುಗುಳ್ನಕ್ಕ ಆನಂತರ ಅವರ ತಾಯಿಯವರು ಮಾತನಾಡಲು ಶುರು ಮಾಡಿದರು.

            “ಯಾವ ಊರಪ್ಪ ನಿಂದು?” ಎಂದು ಕೇಳಿದರು. ಅದಕ್ಕೆ ಅಜ್ಜಂಪುರ ಎಂದು ಹೇಳಿದ. ಅವರಿಂದ ಬಂದ ಮರುಪ್ರಶ್ನೆ ಯಾವ ಅಜ್ಜಂಪುರವೆಂದು. ಅದು ಎಲ್ಲಿ ಬರುತ್ತದೆ? ಎಂದು… ಹೇಗೆ ಹೇಳುವುದು? ಇವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕಲ್ಲ,  ಎಂದು ಯೋಚಿಸಿದವನೇ “ಅದು ನೀವು ಹುಬ್ಬಳ್ಳಿ ಮಾರ್ಗದಲ್ಲಿ ರೈಲಿನಲ್ಲಿ ಹೋಗುವಾಗ ಸಿಗುತ್ತದೆ. ನಿಮಗೆ ಗೊತ್ತಿಲ್ಲವೇ?” ಎಂದು ಕೇಳಿದ. ಅದಕ್ಕವರು “ನಾವು ಹೆಚ್ಚಿನ ಸಮಯ ರಾತ್ರಿ ಪ್ರಯಾಣ ಮಾಡುವುದು. ಹಾಗಾಗಿ ನಮಗೆ ತಿಳಿದಿಲ್ಲ” ಎಂದರು. ಇವರಿಗೆ ನಮ್ಮ ಊರು ನೆನಪಿಟ್ಟುಕೊಳ್ಳುವಂತೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ರೈಲಿನಲ್ಲಿ ಚರುಮುರಿ ಅವನಿಗೆ ಈರುಳ್ಳಿ ಜಾಸ್ತಿ ಹಾಕಪ್ಪ ಎಂದು ಯಾರೋ ಹೇಳಿದ್ದು ಕೇಳಿಸಿತು. “ಅಮ್ಮ ನಿಮಗೆ ಗೊತ್ತಲ್ವಾ, ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಬೆಳೆಯುವ ಪ್ರದೇಶ ನಮ್ಮದು” ಎಂದು ಹೆಮ್ಮೆಯಿಂದ ಹೇಳಿದ. ಮಾತು ಮುಂದುವರೆದು ಮಹಾರಾಷ್ಟ್ರದ ನಾಸಿಕ್ ಇಂದ ಈರುಳ್ಳಿ ಬರುವವರೆಗೂ ನಮ್ಮ ಕಡೆ ಬೆಳೆಯುವ ಈರುಳ್ಳಿಗೆ ಬೇಡಿಕೆ ಎಂದು ಹೇಳುವಾಗಲೇ ಅವರು ನಿನ್ನ ಹೆಸರೇನು ಎಂದು ಕೇಳಿದರು. ವಿಧು ತನ್ನ ಪರಿಚಯವನ್ನು ಮಾಡಿಕೊಂಡು ಅವರ ಪರಿಚಯವನ್ನು ಕೇಳಿದ. ಅವರು ತನ್ನ ಪರಿಚಯ ಮಾಡಿಕೊಳ್ಳುತ್ತಾ “ನಾನು ಸತ್ಯವತಿ, ನಮ್ಮ ಮನೆಯವರ ಹೆಸರು ಚಿದಾನಂದ, ಹಾಗೂ ಈಕೆಯ ಹೆಸರು…..


Author : Rakesh Bhagiratha.

ಪ್ರೇಮದ ಅನ್ವೇಷಣೆ ಭಾಗ-2

ಪ್ರೇಮದ ಅನ್ವೇಷಣೆ ಭಾಗ-2

        ಕಿಟಕಿ ಪಕ್ಕ ದಡೂತಿ ದೇಹದ ಮನುಷ್ಯ ಕುಳಿತಿದ್ದ.ಈ ತುದಿಯ ಪಕ್ಕದಲ್ಲಿ ಸಾಮಾನ್ಯ ಗಾತ್ರದ ವ್ಯಕ್ತಿ ಕುಳಿತಿದ್ದ. ವಿಧು ಕುಳಿತುಕೊಳ್ಳುವುದಕ್ಕೂ ಅವನು ಕುಳಿತುಕೊಂಡ ಹಿಂದಿನ ನಾಲ್ಕನೆಯ ಸಾಲಿನಲ್ಲಿ ಜಾಗಕ್ಕಾಗಿ ಜಗಳ ಶುರುವಾಯಿತು. ಜಾಗಕ್ಕಾಗಿ ನಡೆಯುವ ಜಗಳವನ್ನು ನೋಡಿ ನಗುವನ್ನು ತಡೆಯಲಾರದೆ ಮಂದಸ್ಮಿತನಾಗಿ ನಕ್ಕು ಸುಮ್ಮನಾದ. ಕೆಲವೇ ಗಂಟೆಗಳ ಪ್ರಯಾಣಕ್ಕಾಗಿ ಕುಳಿತುಕೊಳ್ಳುವ ಜಾಗಕ್ಕಾಗಿ ಈ ರೀತಿ ಕಿತ್ತಾಡುವಾಗ, ಇನ್ನು ಅಧಿಕಾರದಾಹದ ನಮ್ಮ ರಾಜಕಾರಣಿಗಳು ಮಂತ್ರಿಗಿರಿಗಾಗಿ ಕುರ್ಚಿಗಾಗಿ ಹೊಡೆದಾಡುವುದುರಲ್ಲಿ ಅರ್ಥವಿದೆಯೇನೋ ಅನಿಸಿತು. ರೈಲು ಹೊರಡುವ ಸಮಯದ ಹೊತ್ತಿಗೆ ಯಥಾಪ್ರಕಾರ ರೈಲುಗಾಡಿಯು ತುಂಬಿ ತುಳುಕುತ್ತಾ ತನ್ನ ಚುಕುಬುಕು ಸದ್ದಿನೊಂದಿಗೆ ಹೊರಡುವ ಹೊತ್ತಿಗೆ ನೆತ್ತಿಯ ಮೇಲಿನ ಸೂರ್ಯ ಸರಿಯುತ್ತಲಿದ್ದ.
           ರೈಲಿನ ವೇಗ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದ ವಿಧುವಿಗೆ ರೈಲು ತನ್ನ ನಿಲ್ದಾಣವನ್ನು ಬಿಟ್ಟು, ಇನ್ನೂ ವೇಗವನ್ನು ಹೆಚ್ಚಿಸುತ್ತಿರುವವಾಗಲೇ ತಾನು ಪ್ರತಿಬಾರಿಯೂ ಪ್ರಯಾಣದಲ್ಲಿ ತೆಗೆದುಕೊಂಡು ಹೋಗುವ ಯಾವುದಾದರೂ ಪುಸ್ತಕವನ್ನು ತನ್ನ ಬ್ಯಾಗಿನಲ್ಲಿ ಇಡುವಂತೆ ತನ್ನ ರೂಮಿನ ಸಹಪಾಠಿಗೆ ಹೇಳಿದ್ದು ನೆನಪಾಯಿತು. ವಿಧುವಿನ ಪುಸ್ತಕದ ಗೀಳನ್ನು ಬಲ್ಲವನಾಗಿದ್ದ ಆತನ ರೂಮಿನ ಸಹಪಾಠಿ ತ್ರಿಭುವನ್ ಹಿಂದಿನ ರಾತ್ರಿ ಓದುತ್ತಿದ್ದ ಪುಸ್ತಕವಾದ ‘ಭಾರತೀಯ ಕ್ಷಾತ್ರ ಪರಂಪರೆ’ ಪುಸ್ತಕವನ್ನು ತೆಗೆದು ಓದಲು ಶುರುಮಾಡಿದ. ಅಷ್ಟರಲ್ಲೇ ಯಾರೋ ಜೋರಾಗಿ ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಕಂಚಿನ ಕಂಠದ ಮಾತನ್ನು ಕೇಳಿ ತನ್ನ ತಲೆಯನ್ನು ಎತ್ತಿ ಮುಂದೆ ನೋಡಿದಾಗ ಮಧ್ಯವಯಸ್ಸಿನ ತಂದೆ-ತಾಯಿ ಹಾಗೂ ಅವರ ಮಗಳು ಕುಳಿತಿದ್ದರು. ಅವರು ತಮ್ಮ ಮಗಳಿಗೆ ಊಟದ ಬುತ್ತಿಯನ್ನು ಬಿಚ್ಚಿ ತಿನ್ನಲು ಕೊಡುತ್ತಿದ್ದರು. ಅವರನ್ನು ನೋಡಿದಾಗ ಅವರ ವೇಷಭೂಷಣದಿಂದ ಅವರು ಕರ್ನಾಟಕದ ಉತ್ತರ ಭಾಗದವರು ಎಂದು ತಿಳಿಯಲು ಸುಲಭವಾಗುವಂತೆ ಇತ್ತು. ಅವರು ಬಟ್ಟೆ ಧರಿಸಿದ ರೀತಿ ಇನ್ನೂ ತಮ್ಮತನವನ್ನು ಉಳಿಸಿಕೊಂಡು ಹೋಗುತ್ತಿರುವ, ಕರ್ನಾಟಕದ ಉತ್ತರ ಭಾಗದ ಅವರೆಂದರೆ ಸ್ವಲ್ಪ ಅಭಿಮಾನ ಹಾಗೂ ಹೆಚ್ಚು ಪ್ರೀತಿ. ಆ ತಾಯಿ ಅಗಲವಾದ ಹಣೆಯ ಮೇಲೆ ದೊಡ್ಡ ಕುಂಕುಮ, ಮೂಗಿನ ಎರಡು ಕಡೆ ವಜ್ರಾಭರಣಗಳ ಮೂಗುತಿ, ತುಂಬಾ ವಿಶೇಷವಾಗಿ ಕಾಣುವ ಗುಂಡಿನ ಸರ ಹಾಗೂ ಜರಿಯಂಚಿನ ಚಿನ್ನದ ಬಣ್ಣದ ಕಾಟನ್ ಸೀರೆಯನ್ನು ಉಟ್ಟುಕೊಂಡಿದ್ದಳು. ಆ ತಾಯಿ ಇನ್ನೂ ನಗರೀಕರಣದ ಪ್ರಭಾವಕ್ಕೆ ಒಳಗಾಗದೆ ಗ್ರಾಮೀಣ ಸೊಗಡಿನ ಮೂಲನೆಲೆಯನ್ನು ಉಳಿಸಿಕೊಂಡಿದ್ದು ಎದ್ದು ತೋರುತ್ತಿತ್ತು.
            ಇನ್ನು ಅವರ ತಂದೆಯು ಕುರ್ತಾದೂಂದಿಗೆ ಕಚ್ಚೆ ಪಂಚೆಯನ್ನು ತೊಟ್ಟಿದ್ದು, ಅವರ ಮುಖದ ಮೇಲಿನ ದಪ್ಪನೆಯ ಮೀಸೆ, ಆ ಮುಖದಲ್ಲಿನ ಗಾಂಭೀರ್ಯ ಅವರು ಆ ಕುಟುಂಬದ ಯಜಮಾನ ಎಂಬುದು ಖಾತ್ರಿ ಪಡಿಸುವಂತೆ ಇತ್ತು. ಇನ್ನು ಕೊನೆಯಲ್ಲಿ ಕುಳಿತಿದ್ದ ಹುಡುಗಿಯನ್ನು ನೋಡಿ “ಅರೇ! ಯಾರು ಈ ಹುಡುಗಿ? ಸುಮ್ಮನೆ ಮೌನವಾಗಿ ಕಿಟಕಿಯಾಚೆಗಿನ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಕುಳಿತಿರುವಳಲ್ಲ..?” ಎಂದುಕೊಂಡ. ಇಂದಿನ ಶೈಲಿಯ ಉಡುಗೆ-ತೊಡುಗೆ ತೊಟ್ಟು ಚಿನ್ನದ ಮೂಗುತಿಯನ್ನು ಸರಿ ಮಾಡಿಕೊಳ್ಳುತ್ತಾ ಕುಳಿತಿದ್ದ ಈ ಹುಡುಗಿ ಯಾರಿರಬಹುದು ಎಂದುಕೊಳ್ಳುವಷ್ಟರಲ್ಲಿ ಆ ಹುಡುಗಿಯ ಪಕ್ಕದಲ್ಲಿ ಕುಳಿತಿದ್ದ ತಾಯಿ ಹುಡುಗಿಯ ಕೈಗೆ ರೊಟ್ಟಿ ಊಟವನ್ನು ಕೊಟ್ಟರು. ಅಮ್ಮಾ… ನಾನು ಆನಂತರ ಊಟವನ್ನು ಮಾಡುತ್ತೇನೆ ಎಂದು ಆ ಹುಡುಗಿ ಊಟವನ್ನು ನಿರಾಕರಿಸಿದಳು. ಓ ಇವರು ತಾಯಿ-ಮಗಳು ಎಂದುಕೊಂಡು ತನ್ನ ಪುಸ್ತಕವನ್ನು ಓದಲು ಮುಂದುವರಿಸಿದನು. ರೈಲು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸುತ್ತಾ ಹೋದಂತೆ, ಆ ತಂದೆ ತಾಯಿ ಮತ್ತು ಮಗಳ ನಡುವಿನ ಚರ್ಚೆಯೂ ಹೆಚ್ಚಾಗುತ್ತಾ ಹೋಯಿತು. ಹಲವಾರು ವಿಷಯಗಳನ್ನು ಚರ್ಚಿಸುತ್ತಾ ಕುಳಿತಿದ್ದ ಅವರ ಗದ್ದಲದಲ್ಲಿ ವಿಧು ಓದು ಮುಂದುವರಿಸುವುದು ಕಷ್ಟವಾಯಿತು. ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಹಾಕಿಕೊಂಡು ಮೌನವಾಗಿ ಕುಳಿತ. ಆದರೂ ತನ್ನ ಮನಸ್ಸಿನ ಆಲೋಚನೆಯನ್ನು ತಡೆಯಲಾದಿತೇ? ಮನಸ್ಸಿನಲ್ಲೇ ತಂದೆ-ತಾಯಿ ಇಷ್ಟು ಊಟಕ್ಕಾಗಿ ಹಿಂಸೆ ಮಾಡಿ ತಿನ್ನಿಸುತ್ತಿರುವುದರಿಂದಲೇ ಆ ಹುಡುಗಿ ತೆಳ್ಳಗೆ ಸಣ್ಣವಾಗಿರುವುದು ಎಂದುಕೊಂಡು ಸುಮ್ಮನಾದ.....

Author : Rakesh Bhagiratha.

ಪ್ರೇಮದ ಅನ್ವೇಷಣೆ ಭಾಗ-1

ಪ್ರೇಮದ ಅನ್ವೇಷಣೆ ಭಾಗ-1

          ಬೆಂಗಳೂರು ಎಂಬ ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಿಂದ ಹೊರಟು ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗವಾಗಿ ಬೆಂಗಳೂರು ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುವ ಹೊತ್ತಿಗೆ 3:00 ಗಂಟೆ ಸರಿದಿತ್ತು. ಮೆಜೆಸ್ಟಿಕ್ ನಿಲ್ದಾಣದಿಂದ ಹೊರಟು ರೈಲು ನಿಲ್ದಾಣಕ್ಕೆ ಹೋಗಿ ಬೆಂಗಳೂರು-ಹುಬ್ಬಳ್ಳಿ ಇಂಟರ್ ಸಿಟಿ ರೈಲಿನಲ್ಲಿ ಜಾಗ ಹಿಡಿಯುವಷ್ಟರಲ್ಲಿ ಮತ್ತೆ ಅರ್ಧಗಂಟೆ ಸಮಯ ಸರಿದು ಹೋಯಿತು. ಆ ರೈಲಿನಲ್ಲಿ ದಿನವೂ ತುಂಬಾ ಜನರು ಪ್ರಯಾಣಿಸುತ್ತಿದ್ದರಿಂದ ಅರ್ಧ ಗಂಟೆ ಮೊದಲೇ ತಲುಪಬೇಕೆಂಬ ಲೆಕ್ಕಾಚಾರ ತಲೆಕೆಳಗಾಯಿತು. ಬೆಂಗಳೂರು ಎಂಬ ಮಹಾನಗರದ ಜನಸಂದಣಿಯ ಟ್ರಾಫಿಕ್ ಸಮಸ್ಯೆ ನಮ್ಮ ಸಮಯದ ಲೆಕ್ಕಾಚಾರವನ್ನೇ ಪರಿಶೀಲಿಸುವಂತೆ ಮಾಡುತ್ತದೆ ಎಂದು ಕೇಳಿದ್ದ, ಆದರೆ ಅದರ ಅನುಭವವಾಯಿತು. ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಸಂಚರಿಸಿ ಅನುಭವವಿದ್ದ ವಿಧುವಿಗೆ ಇನ್ನು ಯಾವ ಕಾಲಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಚಾರ ಆರಂಭವಾಗುವುದೋ ಎಂದು ಅಂದುಕೊಳ್ಳುತ್ತಿರುವಾಗಲೇ, ಮನಸ್ಸಿನಲ್ಲಿ ಬೆಂಗಳೂರಿನಲ್ಲಿ ಯಾಕೆ ಈ ರೀತಿ ಜನಸಂಖ್ಯೆ ಎಂದು ಯೋಚಿಸತೊಡಗಿದಾಗ ‘ಬೆಂಗಳೂರು ಎಂಬ ಮಹಾನಗರದಲ್ಲಿ ಎಲ್ಲಿಂದ ಬಂದರೂ ಜೀವಿಸಬಹುದು’ ಎಂಬ ಮಾತು ನೆನಪಿಗೆ ಬಂತು.
        ಮೆಜೆಸ್ಟಿಕ್ ನಿಲ್ದಾಣದಿಂದ ಅಂಡರ್ ಪಾಸ್ ಮುಖಾಂತರ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಯಾರೋ ಹಣ್ಣುಗಳನ್ನು ಮಾರುತ್ತಿರುವ ಕೂಗು ಕೇಳಿಸಿತು. ತಿರುಗಿ ನೋಡಿದರೆ ಒಂದು ಬಿದಿರಿನ ಬುಟ್ಟಿಯ ತುಂಬಾ ಹಣ್ಣುಗಳನ್ನು ತುಂಬಿಕೊಂಡು ಕುಳಿತಿರುವ ಕಪ್ಪುವರ್ಣದ, ತನ್ನ ಮುಖದಲ್ಲಿ ಬದುಕಿನ ಅನುಭವವನ್ನು ಹೂತ್ತು ಕುಳಿತಿರುವ ಹಿರಿಯ ಜೀವ. ತನ್ನ ಇಳಿವಯಸ್ಸಿನಲ್ಲೂ ಬೇರೆಯವರ ಮುಂದೆ ತುತ್ತು ಅನ್ನಕ್ಕಾಗಿ ಕೈಯನ್ನು ಚಾಚದೆ ತನ್ನ ಸ್ವಂತ ದುಡಿಮೆಯಲ್ಲಿ ಜೀವನ ನಡೆಸುತ್ತಿರುವ ಅಜ್ಜಿಯನ್ನು ಕಂಡು ಖುಷಿಯಾಯಿತು. ವಿಧುವಿನ ಸೂಕ್ಷ್ಮ ಮನಸ್ಸಿಗೆ ಇಂದಿನ ಸಾಮಾಜಿಕ ಪರಿಸ್ಥಿತಿಯ ಬದಲಾವಣೆ ಕಂಡು ಖೇದವೂ ಉಂಟಾಯಿತು. ಗಟ್ಟಿಯಾಗಿದ್ದು ಕೈತುಂಬ ಸಂಪಾದನೆ ಇದ್ದರೆ ಮಾತ್ರ ಮನುಷ್ಯನಿಗೆ ಬೆಲೆ ಎನ್ನುವ ಮಾತು ಅಕ್ಷರಶಃ ಸತ್ಯ ಎಂದು ಅರಿವಿಗೆ ಬಂತು. ಅಜ್ಜಿಯ ಪರಿಸ್ಥಿತಿ ಕಂಡು ಮನಸ್ಸು ಮುರುಗಿದ್ದರಿಂದ ಅಜ್ಜಿಗೆ ಹಣ ಸಹಾಯವನ್ನು ಮಾಡಲು ಹೋದರೆ, ಆ ಸ್ವಾಭಿಮಾನಿ ಅಜ್ಜಿ ಹಣ್ಣನ್ನು ಕೊಂಡರೆ ಮಾತ್ರ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅವರ ಸ್ವಾಭಿಮಾನಕ್ಕೆ ಮನಸ್ಸಿನಲ್ಲೇ ಶಿರಬಾಗಿದ ವಿಧು, ಸರಿ ಹಾಗಾದರೆ ಹಣ್ಣನ್ನು ಕೊಡಿ ಎಂದು ಹಣ್ಣನ್ನು ತೆಗೆದುಕೊಂಡ. ಚಿಲ್ಲರೆ ನಿಮ್ಮಲ್ಲೇ ಇರಲಿ ಎಂದರೂ ಅಜ್ಜಿ ಅದನ್ನು ಸ್ವೀಕರಿಸಲು ಒಪ್ಪಲಿಲ್ಲ.ಅಜ್ಜಿಯ ಸ್ವಾಭಿಮಾನ ಕಂಡು ಅಜ್ಜಿಯ ಮೇಲಿನ ಗೌರವ ನೂರ್ಮಡಿಗೊಂಡಿತು. ಹಣ್ಣನ್ನು ತೆಗೆದುಕೊಂಡು ಮುಂದೆ ಸ್ವಲ್ಪ ದೂರ ಸಾಗುತ್ತಿರುವಾಗಲೇ ಕಣ್ಣು ಕಾಣದ ಕುರುಡ ವ್ಯಕ್ತಿಯೊಬ್ಬ ದೇಹ ತೂಕದ ಯಂತ್ರವನ್ನು ಹಿಡಿದು ಕುಳಿತಿದ್ದ.ಅಲ್ಲಿ ಕೆಲವರು ಎರಡು ರೂಪಾಯಿಗಳನ್ನು ಅವನ ಕೈಗೆ ಕೊಟ್ಟು ತಮ್ಮ ತೂಕವನ್ನು ಪರಿಶೀಲಿಸಿಕೊಳ್ಳುತ್ತಿದ್ದರು. ತಾನು ತೂಕವನ್ನು ಪರಿಶೀಲಿಸಿ ಕೊಳ್ಳುವ ಅವಶ್ಯಕತೆ ಇಲ್ಲದಿದ್ದರೂ ಅವರ ಸ್ವಾಭಿಮಾನದ ದುಡಿಮೆಗೆ ನನ್ನದೊಂದು ಸಣ್ಣ ಸಹಾಯವಾಗಲಿ ಎಂದುಕೊಂಡು ತಾನೂ ಕೂಡ ತನ್ನ ತೂಕವನ್ನು ಪರಿಶೀಲಿಸಿಕೊಂಡು ಮುನ್ನಡೆದನು. ಎದುರಿಗೆ ಬೆಂಗಳೂರು ರೈಲು ನಿಲ್ದಾಣಕ್ಕೆ ದಾರಿ ಎಂಬ ನಾಮಫಲಕ ಸಿಕ್ಕಿತ್ತು. ವಿಧು ಅದನ್ನು ಅನುಸರಿಸಿ ನಡೆದು ಅಂಡರ್ ಪಾಸ್ ನಿಂದ ಹೂರಗಡೆ ಬರುವುದರಲ್ಲಿ ಹಿರಿಯ ಜೀವ ಹಾಗೂ ಕಣ್ಣುಕಾಣದ ವ್ಯಕ್ತಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು ನೋಡಿ, ಮತ್ತೊಮ್ಮೆ ‘ಬೆಂಗಳೂರು ಯಾರಿಗಾದರೂ ಬದುಕು ಕೊಡುತ್ತದೆ’ ಎಂಬುದರ ಅರಿವಾಯಿತು.
        ಅಂತೂ ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ಹಾವಿನ ಬಾಲದಂತೆ ಸರತಿ ಸಾಲು ನೋಡಿ ಅವಾಕ್ಕಾದ. ಯಾವಾಗಲೂ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ನೇರವಾಗಿ ಹೋಗುತ್ತಿದ್ದ ವಿಧುವಿಗೆ ಸ್ವಲ್ಪ ಕಿರಿಕಿರಿ ಎನಿಸಿದರೂ, ಒಂದು ಹೊಸ ಅನುಭವ ಒದಗಿಸಿಕೊಟ್ಟಿತು. ಅಂತೂ ರೈಲಿನ ಟಿಕೆಟ್ ಖರೀದಿಸಿ ಪ್ಲಾಟ್ಫಾರ್ಮ್ ಹುಡುಕಿ ಹೋಗಿ ರೈಲಿನಲ್ಲಿ ಜಾಗಕ್ಕೆ ಹುಡುಕತೊಡಗಿದ. ಸುಡುಬಿಸಿಲಿನ ಬೇಸಿಗೆಯ ಸೆಕೆಯ ಕಾಲವಾಗಿದ್ದರಿಂದ ಕಿಟಕಿಯ ಪಕ್ಕ ಕೂರಲು ಜಾಗಕ್ಕಾಗಿ ಹುಡುಕಿದರೂ ಎಲ್ಲಾ ಸೀಟುಗಗಳೂ ಭರ್ತಿಯಾಗಿದ್ದವು. ರೈಲಿನ ಹಿಂದಿನ ಭೋಗಿಯಿಂದ ಇಂಜಿನ್ ವರೆಗೆ ತಡಕಾಡಿದರೂ ಕಿಟಕಿಯ ಪಕ್ಕ ಜಾಗ ಸಿಗದೇ ಹೋಯಿತು. ಇನ್ನೂ ಹುಡುಕಿದರೆ ಇರುವ ಜಾಗವೂ ಇಲ್ಲದಂತಾಗುತ್ತದೆಂದು ನಿರ್ಧರಿಸಿ ಬರುವಷ್ಟರಲ್ಲಿ ಇರುವ ಜಾಗಗಳೂ ಬರ್ತಿ ಆಗಿದ್ದವು. ಉಳಿದ ಜಾಗಕ್ಕಾಗಿ ಹುಡುಕಾಡಿದರೆ ಮಧ್ಯಭಾಗದಲ್ಲಿ ಮಾತ್ರ ಇದ್ದವು. “ಅಯ್ಯೋ… ನಾನು ಮೊದಲೇ ಕುಳಿತುಕೊಂಡಿದ್ದರೆ ಇಬ್ಬರ ಮಧ್ಯದಲ್ಲಿ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಬರುತ್ತಿರಲಿಲ್ಲವಲ್ಲ” ಎಂದು ಅಂದುಕೊಂಡು ಇದ್ದ ಸ್ವಲ್ಪ ಸ್ಥಳಾವಕಾಶದಲ್ಲೇ ಕುಳಿತುಕೊಂಡ.......

Author : Rakesh Bhagiratha.

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಕುರಿತು ಚರ್ಚೆ.

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಕ್ರಮಗಳ ಕುರಿತು ಒಂದು ಸಾರ್ವಜನಿಕ ಚರ್ಚೆ.


      ನಮ್ಮ ಭಾರತದಂತಹ ದೇಶದ ಸಂಕೀರ್ಣತೆ ತುಂಬಿರುವ ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಆಶಯವೇ ಅಂತಿಮವಾಗಿ ಚುನಾವಣೆಯ ಗೆಲುವುಗಳಾಗಿ ದಾಖಲಾಗುತ್ತವೆ. ಭಾರತ ದೇಶದ ಲೋಕಸಭಾ ಚುನಾವಣೆ ಎಂದರೆ ವಿಶ್ವದ ಗಮನವನ್ನು ಸೆಳೆಯುವ ಚುನಾವಣೆ. ಇಡೀ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಯ ನಡೆಯುವುದೆಂದರೆ ನಮ್ಮ ಭಾರತ ದೇಶದ ಚುನಾವಣೆ. ಅದನ್ನು ನಡೆಸಿಕೊಡುವ ಚುನಾವಣಾ ಆಯೋಗವು ತುಂಬಾ ಅಚ್ಚುಕಟ್ಟಾಗಿ, ಸ್ವತಂತ್ರವಾಗಿ ಚುನಾವಣೆಯನ್ನು ನಡೆಸುತ್ತದೆ. ಹಳ್ಳಿಯಿಂದ ದಿಲ್ಲಿ ವರೆಗೆ ಚುನಾವಣೆಯೆಂದರೆ ಭಾರತದಲ್ಲಿ ಒಂದು ರೀತಿಯ ಹಬ್ಬವಿದ್ದಂತೆ. ಚುನಾವಣಾ ಆಯೋಗವು ನಡೆಸುವ ಚುನಾವಣೆಯಲ್ಲಿ ಅಂತಿಮವಾಗಿ ಆಯ್ಕೆಯಾದ ನಂತರ ವಿಕೇಂದ್ರೀಕರಣದಿಂದ ಶಕ್ತಿಯುತವಾಗಿ ನಿಲ್ಲಬೇಕಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಆಯ್ಕೆಯ ವಿಚಾರವು ಕುದುರೆ ವ್ಯಾಪಾರದಲ್ಲಿ ಸಮಗೊಳ್ಳುತ್ತದೆ. ಏಕೆಂದರೆ ಗ್ರಾಮಮಟ್ಟದಲ್ಲಿ ಅಭ್ಯರ್ಥಿಯು ಯಾವುದೇ ಪಕ್ಷದ ಚಿನ್ನೆಯಿಂದ ಚುನಾವಣೆ ಸ್ಪರ್ಧಿಸದಿರುವ ಕಾರಣ ಅವನಿಗೆ ಉನ್ನತ ಹಂತಹದ ಚುನಾವಣೆಗಳಂತೆ ಯಾವುದೇ ಪಕ್ಷದ ಕಟ್ಟುಪಾಡುಗಳು ಇರುವುದಿಲ್ಲ.ಅದು ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಕುದುರೆ ವ್ಯಾಪಾರದಂತಹ ವ್ಯವಸ್ಥೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸದಸ್ಯರಿಂದ ಯಾವ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ?

ಅಧ್ಯಕ್ಷನ ಆಯ್ಕೆಯು ಮೇಲ್ನೋಟಕ್ಕೆ ಸದಸ್ಯರಿಂದ ಆದಂತೆ ಕಾನೂನಿನ ಕಣ್ಣಿಗೆ ಕಂಡರೂ, ಆದರ ಹಿಂದಿನ ವ್ಯಾಪಾರ ಅಂತಿಮವಾಗಿ ಬ್ರಷ್ಟಾಚಾರಕ್ಕೆ ಅನುವುಮಾಡಿಕೊಡುತ್ತದೆ. ಹಣ ಬಲದಿಂದ ಆಯ್ಕೆಯಾಗುವ ಅವಕಾಶವಿರುವಾಗ ಉನ್ನತ ವಿದ್ಯಾಭ್ಯಾಸ ಮಾಡಿದವರು ಚುನಾವಣೆಗೆ ನಿಂತರೂ ಸೋಲುತ್ತಾರೆ. ಕೆಳಹಂತದಲ್ಲಿ ವಿದ್ಯಾಭ್ಯಾಸ ಮಾಡಿದವರು ಅಧಿಕಾರ ಗಳಿಸಿದರೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಆಯ್ಕೆಯೂ ನೇರವಾಗಿ ಪ್ರಜೆಗಳ ಮುಖಾಂತರವೇ ನಡೆಯುವುದಾದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತನ್ನದೇ ಆದಂತಹ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸಲು ಅನುಮಾಡಿಕೊಟ್ಟಂತಾಗುತ್ತದೆ.ನಮ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ಕೂಡ ನನಸು ಮಾಡಲು ನಾವು ಹೆಜ್ಜೆ ಇಟ್ಟಂತೆ ಆಗುತ್ತದೆ.
ಇನ್ನು ತಾಲೂಕು ಪಂಚಾಯಿತಿ ವಿಷಯಕ್ಕೆ ಬರುವುದಾದರೆ, ಗ್ರಾಮಪಂಚಾಯಿತಿಗಳು ಮಾಡುವ ಕೆಲಸಗಳನ್ನೇ ತಾಲೂಕು ಪಂಚಾಯಿತಿಗಳೂ ಮಾಡುವುದು. ತಾಲೂಕು ಪಂಚಾಯಿತಿ ಸದಸ್ಯರ ಅನುದಾನವು ತುಂಬಾ ಕಡಿಮೆ ಇರುವ ಕಾರಣ, ಅವರಿಂದ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗಳನ್ನು ನಿರೀಕ್ಷಿಸುವುದು ಅಸಾಧ್ಯವಾಗುತ್ತದೆ.ಗ್ರಾಮ ಪಂಚಾಯತಿಯನ್ನು ತಾಲೂಕ್ ಪಂಚಾಯಿತಿ ಇಲ್ಲದಂತೆ ನೇರವಾಗಿ ಜಿಲ್ಲಾ ಪಂಚಾಯಿತಿಗೆ ಜೋಡಿಸಿದ ಪಕ್ಷದಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಗ್ರಾಮ ಪಂಚಾಯಿತಿ ನೇರವಾಗಿ ಜಿಲ್ಲಾಪಂಚಾಯಿತಿ ಅವರ ಕೈಗೆ ಸಿಗುವುದರಿಂದ ಜಿಲ್ಲಾ ಪಂಚಾಯಿತಿಗೆ ತನ್ನದೇ ಆದ ಶಕ್ತಿ ಬರುತ್ತದೆ. ಇದು ಆಡಳಿತ ದೃಷ್ಟಿಕೋನದಿಂದ ಸಹಾಯಕಾರಿ.
ಪಂಚಾಯತ್ ರಾಜ್ ವಿಷಯವಾಗಿ ಬರೋಡಲಿ ಸತ್ಯಾಗ್ರಹದಲ್ಲಿ ಹೋರಾಡಿದ ಗುಜರಾತ್ ಮುಖ್ಯಮಂತ್ರಿಯಾಗಿ ಅನುಭವವಿರುವ ಬಲವಂತರಾಯ್ ಮೆಹ್ತಾ ಸಮಿತಿಯನ್ನು 1957 ರಲ್ಲಿ ಕೇಂದ್ರ ಸರ್ಕಾರವು ನೇಮಿಸಿತು. ಆ ಸಮಿತಿಯು ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಗೆ ನಾಂದಿ ಹಾಡಿತು. ಆನಂತರ ಬಂದ ಹಲವಾರು ಸಮಿತಿಗಳು ಶಿಫಾರಸುಗಳನ್ನು ಮಾಡುವುದರ ಮುಖಾಂತರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದವು.ಆದರೆ ಮೊದಲನೆಯ ಹಂತದ ಜಿಲ್ಲಾ ಪಂಚಾಯತ್ ಹಾಗೂ ಕೊನೆಯ ಹಂತದ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸಮಿತಿಗಳು ಶಿಫಾರಸು ಮಾಡಿದ್ದವು. ಆದರೆ ತಾಲೂಕು ಪಂಚಾಯಿತಿಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೆಲಸ ಕಾರ್ಯಗಳು ನಡೆಯದಂತೆ ಆದವು. ತಾಲೂಕು ಪಂಚಾಯಿತಿ ಹೆಸರಿಗೆ ಮಾತ್ರ ಉಳಿಯುವಂತಾಯಿತು. ತಾಲೂಕು ಪಂಚಾಯಿತಿ ಚುನಾವಣೆಯು ಬೊಕ್ಕಸಕ್ಕೆ ಆರ್ಥಿಕ ಹೊರೆಯನ್ನು ತಂದೊಡ್ಡುತ್ತದೆ. ತಾಲೂಕು ಪಂಚಾಯಿತಿ ಪ್ರಾಮುಖ್ಯತೆ ಕಾಲಕ್ರಮದಲ್ಲಿ ಕಡಿಮೆಯಾಯಿತು. ತಾಲೂಕು ಪಂಚಾಯಿತಿ ಇರಬೇಕೇ ಅಥವಾ ಅದನ್ನು ವಿಸರ್ಜಿಸಬೇಕೇ ಎನ್ನುವುದು ಸಾರ್ವಜನಿಕವಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿದೆ.
ಇನ್ನು ಚುನಾವಣಾ ಆಯೋಗವು (Amending) rule 90, conduct of election rules 1961 ) ರ ಪ್ರಕಾರ, ಲೋಕಸಭಾ ಚುನಾವಣೆಯನ್ನು 70 ಲಕ್ಷ ರೂ ವೆಚ್ಚದಲ್ಲಿ ಹಾಗೂ ವಿಧಾನಸಭೆ ಚುನಾವಣೆಯನ್ನು 28 ಲಕ್ಷ ರು ವೆಚ್ಚದಲ್ಲಿ ನಡೆಸುವಂತೆ ಹೇಳಿದೆ.ಅದು ನಿಜವಾಗಲೂ ಸಾಧ್ಯವೇ ಎಂಬುದು ನಮ್ಮಲ್ಲಿ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಾಗಲು ಕನಿಷ್ಠ ಪಕ್ಷ 5 ಲಕ್ಷ ರೂ.ಗಳು, ತಾಲೂಕು ಪಂಚಾಯತಿ ಸದಸ್ಯನಾಗಲು ಕನಿಷ್ಠ ಪಕ್ಷ 20 ಲಕ್ಷ ರೂ.ಗಳು, ಜಿಲ್ಲಾ ಪಂಚಾಯತಿ ಸದಸ್ಯನಾಗಲು ಕನಿಷ್ಠ ಪಕ್ಷ 50 ಲಕ್ಷ ರೂ.ಗಳ ಖರ್ಚು ಮಾಡಬೇಕಾಗುತ್ತದೆ. ಅವರು ಅಷ್ಟು ಖರ್ಚು ಮಾಡದಿದ್ದಲ್ಲಿ ಅವರು ಗೆಲ್ಲುವುದು ಕಷ್ಟವಾಗುವುದು. ಏಕಕಾಲದಲ್ಲಿ ಚುನಾವಣೆ ಮಾಡುವುದರಿಂದ ಈ ಮೇಲಿನ ಖರ್ಚುಗಳು ಪ್ರತಿಹಂತದಲ್ಲಿ ಮಾಡುವುದು ತಪ್ಪುತ್ತದೆ. ಅದು ದೇಶದ ಆರ್ಥಿಕ ಹೊರೆಯನ್ನು ಕೂಡ ತಗ್ಗಿಸಿದಂತಾಗುತ್ತದೆ. ಜೊತೆಯಲ್ಲಿ ಉತ್ತಮ ಸದಸ್ಯರು ಆಯ್ಕೆಯಾಗುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ. ಒಟ್ಟು ನಮ್ಮ ಭಾರತ ದೇಶದಲ್ಲಿ 4120 ವಿಧಾನಸಭಾ ಸದಸ್ಯರು ಖರ್ಚು ಮಾಡುವ ಅಂದಾಜು ಮೊತ್ತ ಹನ್ನೊಂದು ಬಿಲಿಯನ್. ಕನಿಷ್ಠಪಕ್ಷ ಏನಿಲ್ಲವೆಂದರೂ ವರ್ಷದಲ್ಲಿ ಐದು ರಾಜ್ಯಗಳ ಚುನಾವಣೆಗಳು ನಡೆಯುತ್ತವೆ. ನಮ್ಮ ಲೋಕಸಭಾ, ಗ್ರಾಮಸಭಾ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಖರ್ಚು ಮಾಡುವ ಮೊತ್ತದಲ್ಲಿ ಮೂರು ಬಾರಿ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ಮಾಡಬಹುದು. ಏಕಕಾಲದಲ್ಲಿ ಚುನಾವಣೆ ಮಾಡುವುದರಿಂದ ನೀತಿ ಸಂಹಿತೆಗಾಗಿ ಸರ್ಕಾರಿ ಕೆಲಸಗಳು ನಿಲ್ಲುವುದು ತಪ್ಪುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಹಣ ಬಿಳಿಯಾಗುವುದು ಚುನಾವಣೆಗಳಲ್ಲಿ ಅದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಕೆಳಗಿನ ಗ್ರಾಮ ಪಂಚಾಯಿತಿಯಿಂದ ಮೇಲಿನ ಲೋಕಸಭಾ ಹಂತದವರೆಗೆ ಏಕಪಕ್ಷ ಅಧಿಕಾರಕ್ಕೆ ಬರುವ ಸಂಭವವೂ ಇರುವುದರಿಂದ ಅಭಿವೃದ್ಧಿಯ ವೇಗವೂ ಹೆಚ್ಚುತ್ತದೆ.ಈಗಾಗಲೇ ಹಲವಾರು ದೇಶಗಳು ಏಕಕಾಲದಲ್ಲಿ ಚುನಾವಣೆಯನ್ನು ಮಾಡುತ್ತಿವೆ. ಇಂಡೋನೇಷಿಯಾ, ಸೌತ್ ಆಫ್ರಿಕಾ,ಜರ್ಮನಿ, ಸ್ಪೇನ್ ಬೆಲ್ಜಿಯಂ, ಪೋಲ್ಯಾಂಡ್ ಹೀಗೆ ಹಲವಾರು ದೇಶಗಳು ದೇಶಗಳು ಏಕಕಾಲದಲ್ಲಿ ಚುನಾವಣೆ ನಡೆಸುತ್ತಿವೆ. ಅದರಲ್ಲಿ ಯಶಸ್ಸು ಕಂಡಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದು ಭಾರತಕ್ಕೆ ಹೊಸದಲ್ಲ. ಹಿಂದೆ 1952, 1957, 1962, 1967 ರಲ್ಲಿ ಏಕಕಾಲದಲ್ಲಿ ಚುನಾವಣೆ ಮಾಡಿ ಭಾರತವು ಯಶಸ್ಸನ್ನು ಕಂಡಿದೆ.ಆದರೆ ಆನಂತರದ ಸ್ಥಿತ್ಯಂತರಗಳಲ್ಲಿ ಅದು ಸಾಧ್ಯವಾಗದೇ ಹೋಗಿದೆ. ಮತದಾರರಾದ ನಾವು ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ, ದೇಶದ ಆರ್ಥಿಕತೆಗೆ ನಿರಂತರ ಚುನಾವಣೆಗಳು ಕೊಡುತ್ತಿರುವ ಪೆಟ್ಟನ್ನು ಸರಿಪಡಿಸಲು ಇದು ಸಕಾಲವಾಗಿದೆ.

Author : Rakesh Bhagiratha.

ಸಿಂಹ ಘರ್ಜನೆ