ಗುರುವಿನ ಪದದ ಅನ್ವರ್ಥನಾಮ ನಮ್ಮ ನಿಮ್ಮೆಲ್ಲರ ನೆಚ್ಚಿನ ಗುರುಗಳಾದ ಅಂತಹ ಡಾ! ಜಿ ಆರ್ ಜಗದೀಶ್ ಸರ್. ನಮಗೆ ನಮ್ಮ ಬದುಕಿನಲ್ಲಿ ಹಲವಾರು ಉಪನ್ಯಾಸಕರುಗಳು ಸಿಗಬಹುದು ಅದರಲ್ಲಿ ಕೆಲವರು ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ. ವಿಶೇಷವಾಗಿ ನಿಲ್ಲಲು ಅವರ ವಿಶೇಷ ವ್ಯಕ್ತಿತ್ವ ಕಾರಣವಾಗಿರುತ್ತದೆ. ವ್ಯಕ್ತಿ ಹೇಗೆ ವಿಶೇಷವಾಗುತ್ತಾರೆ ಎಂದು ನೋಡುವುದಾದರೆ ಅವರು ಬೇರೆಯವರನ್ನು ಹೇಗೆ ನಡೆಸಿಕೊಂಡರು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಅವರು ಬೇರೆಯವರ ಬದುಕಿನಲ್ಲಿ ಸ್ಪೂರ್ತಿಯ ಚಿಲುಮೆಯಾಗುತ್ತಾರೆ. ಅವರ ಮಾರ್ಗದರ್ಶನ ಬದುಕಿನ ಪಥವನ್ನು ಬದಲು ಮಾಡಿರುತ್ತದೆ. ಆಗಿದ್ದಾಗ ಮಾತ್ರ ಅವರು ಉಪನ್ಯಾಸಕರಿಂದ ಗುರುಗಳು ಆಗಲು ಸಾಧ್ಯವಾಗುತ್ತದೆ. ಈ ರೀತಿಯ ಗುರುಗಳು ಸಿಗುವುದು ದುರ್ಲಭ ಅಂತಹ ವಿಶೇಷ ವ್ಯಕ್ತಿತ್ವದವರು ಡಾ! ಜಿ ಆರ್ ಜಗದೀಶ್ ಸರ್. ಅವರು ಬೇರೆ ಉಪನ್ಯಾಸಕರಂತೆ ಇರಲಿಲ್ಲ. ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು, ಉಪನ್ಯಾಸಕರು, ಮಾರ್ಗದರ್ಶಕರು ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದರು. ಒಂದು ಕಾಲೇಜಿನಲ್ಲಿ ಅವರನ್ನು ವಿರೋಧಿಸುವಂತಹ ಉಪನ್ಯಾಸಕರ ಗುಂಪಾಗಲಿ ಅಥವಾ ವಿದ್ಯಾರ್ಥಿಗಳ ಗುಂಪಾಗಲಿ ಇಲ್ಲವೆಂದ ಮೇಲೆ ಅವರು ಎಷ್ಟು ಆದರ್ಶಪ್ರಿಯರಾಗಿದ್ದರು ಎಂದು ತಿಳಿಯಬಹುದು.
ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವದ ಗುಣವನ್ನು ಹೊಂದಿದ್ದ ಅವರು ಇತರ ಸ್ನೇಹಿತರಿಗೆ ಮಾರ್ಗದರ್ಶಕರಾಗಿದ್ದರು ಹಾಗೂ ಅವರಲ್ಲಿ ಹೋರಾಟ ಮನೋಭಾವವಿತ್ತೆಂದು ಅವರ ಸ್ನೇಹಿತರಾದ ಮಹೇಶ್ ರವರು ಸ್ಮರಿಸಿರುತ್ತಾರೆ. ಅವರನ್ನು ಅವರ ಸ್ನೇಹಿತ ವಲಯವು ಜಗ್ಗಣ್ಣ ಎಂದು ಪ್ರೀತಿಯಿಂದ ಕರೆಯುತ್ತಿತ್ತು. ಅವರು ಇಂದು ನಮ್ಮನ್ನು ಅಗಲಿದ್ದಾರೆ. ಬದುಕೇ ಹಾಗೆ ಯಾವ ಸುಳಿವನ್ನು ಕೊಡದೆ ತನ್ನ ಕಾರ್ಯವನ್ನು ಮುಗಿಸಿರುತ್ತದೆ. ಅಂತ ಸುಳಿವು ಕೊಡದೆ ಬರುವ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ಹೇಳುತ್ತಿದ್ದವರು ಇಂದು ವಿಧಿಯ ಆಟಕ್ಕೆ ಭೂತಾಯಿಯ ಮಡಿಲಲ್ಲಿ ಲೀನವಾಗಿದ್ದಾರೆ. ಒಳ್ಳೆಯವರೆಂದರೆ ದೇವರಿಗೂ ಬಲು ಪ್ರೀತಿ ಹೆಚ್ಚು ದಿನ ಭೂಮಿಯ ಮೇಲೆ ಇರಲು ಬಿಡುವುದಿಲ್ಲ ಏಕೆಂದರೆ ಎಲ್ಲಿ ಇವರ ಒಳ್ಳೆಯತನದಿಂದ ದೇವರನ್ನೇ ಮರೆಸಿ ಬಿಡುತ್ತಾರೆ ಎನ್ನುವ ಭಯ ಇದ್ದರೂ ಇರಬಹುದು. ಒಟ್ಟಿನಲ್ಲಿ ಎಲ್ಲರೂ ಭೂಮಿಯ ಮೇಲಿನ ಕರ್ತವ್ಯ ಮುಗಿಸಿ ಹೊರಡಬೇಕು. ಆ ಕರ್ತವ್ಯವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಹೇಳಿಕೊಡುತ್ತಿದ್ದವರು ನಮ್ಮ ಗುರುಗಳು. ಬದುಕಿನ ಮೌಲ್ಯ ಹಾಗೂ ಮಾನವ ತತ್ವದ ಆಧಾರದ ಮೇಲೆ ಸಮಾಜವನ್ನು ಕಟ್ಟಬೇಕಾಗುತ್ತದೆ ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿದವರು, ಬರಿ ಕಾನೂನಿನಿಂದ ಬದಲಾವಣೆಯಿಂದ ಸಾಧ್ಯವಿಲ್ಲ ಅದನ್ನು ಅನುಷ್ಠಾನದಲ್ಲಿ ತರಬೇಕೆಂದು ಅದಕ್ಕೆ ಪೂರಕವಾಗಿ ಎಲ್ಲಾ ರಂಗದಲ್ಲೂ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಮಾಜಮುಖಿಯಾಗಿ ಬದುಕಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದವರು. ಅವರಲ್ಲಿ ಅಪಾರವಾದ ಜ್ಞಾನ ಸಂಪತ್ತಿದ್ದರು ಬಸವಣ್ಣನವರು ಹೇಳಿದಂತೆ ತನಗಿಂತ ಕಿರಿಯರಿಲ್ಲ ಎಂಬ ನಾಡು ನುಡಿಯಂತೆ ನಡೆದವರು. ನಮ್ಮಂತಹ ಕಿರಿಯರು ತಪ್ಪು ಮಾಡಿದಾಗ ತಿದ್ದಿ ತೀಡಿದವರು. ಅವರು ಸಂವಿಧಾನವನ್ನು ವಿಶ್ಲೇಷಣೆ ಮಾಡುತ್ತಿದ್ದೆ ವಿಶಿಷ್ಟವಾಗಿತ್ತು ಸಂವಿಧಾನದ ಬಗ್ಗೆ ಅಪಾರಜ್ಞಾನವುಳ್ಳವರಾಗಿದ್ದವರು ಮನುಷ್ಯತ್ವ ಮಾನವೀಯತೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಕೊಟ್ಟವರು. ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿ, ಹೋರಾಟಕ್ಕೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹ ನೀಡುತ್ತಿದ್ದವರು.
ಅವರು ತನ್ನ ಸಹಪಾಠಿ ಉಪನ್ಯಾಸಕರುಗಳಿಗೆ ನೀಡುತ್ತಿದ್ದ ಗೌರವ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರುಗಳನ್ನು ತೊಡಗಿಸುತ್ತಿದ್ದ ರೀತಿ ವಿಶೇಷ. ಸಹಪಾಠಿ ಉಪನ್ಯಾಸಕರಿಗೂ ಬದುಕಿನ ಪಾಠವನ್ನು ಹೇಳುತ್ತಾ ಮಾರ್ಗದರ್ಶನ ಮಾಡುತ್ತಾ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತಾ ಆಕಾಶದಲ್ಲಿನ ನಕ್ಷತ್ರವು ಮಾಯವಾದಂತೆ ಮಾಯವಾಗಿ ಬಿಟ್ಟರು. ಶರಣರ ಸಾವು ಮರಣದಲ್ಲಿ ಕಾಣು ಎನ್ನುವ ನಾಡು ನುಡಿಯಂತೆ ಅವರ ಸಾವಿನಲ್ಲಿ ಬಂದ ಜನ ಸಮೂಹ ಅವರ ಹಳೆಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು ಅವರ ಮಹತ್ವವನ್ನು ಸಾರಿ ಹೇಳುತ್ತಿದ್ದವು. ಗುರುವಿಗೆ ವಿದ್ಯಾರ್ಥಿಯ ಉನ್ನತಿಯೇ ಸಾರ್ಥಕತೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಉನ್ನತಿಯನ್ನು ಸಾಧಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಮಾಡಬೇಕಾದ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ನಿಮ್ಮೆಲ್ಲರ ಮೇಲಿದೆ. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ಇಂತಹ ಗುರುವಿಗೆ ನನ್ನದೊಂದು ಅಕ್ಷರ ನಮನ......
No comments:
Post a Comment