ಕನ್ನಡ ಕರ್ನಾಟಕದ ರಾಜ್ಯ ಭಾಷೆ ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.
ಕನ್ನಡ ಬಳಕೆಯಲ್ಲಿರುವ
ಪ್ರದೇಶಗಳು:
ಕರ್ನಾಟಕ, ಭಾರತ, ಕೇರಳಕ್ಕೆ ಸೇರಿಹೋಗಿರುವ ಕಾಸರಗೋಡು, ಮಹಾರಾಷ್ಟ್ರ, ಆಂಧ್ರಪ್ರದೇಶ,ತೆಲಂಗಾಣ, ಗೋವಾ, ತಮಿಳುನಾಡು ಮುಂತಾದೆಡೆಗಳಲ್ಲಿಯೂ ಭಾರತದಿಂದ ಹೊರಗಿರುವ ಕೆನಡಾ, ಆಸ್ಟ್ರೇಲಿಯ, ಮಲೇಷಿಯಾ, ಸಿಂಗಾಪುರ, ಯು.ಕೆ., ಜರ್ಮನಿ, ಹಾಂಗ್ ಕಾಂಗ್, ನ್ಯೂಜಿಲ್ಯಾಂಡ್, ಮೌರೀಷಿಯಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಥಾಯ್ಲ್ಯಾಂಡ್. ಮುಂತಾದೆಡೆಗಳಲ್ಲಿಯೂ ಬದುಕಿರುವ ಜನಗಳು ಕನ್ನಡ ಭಾಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅಧಿಕೃತ ವಿವರಗಳು ಇವೆ.
ಒಟ್ಟು
ಮಾತನಾಡುವವರು:
೬೪ ದಶಲಕ್ಷ (೨೦೧೧), ಇವರಲ್ಲಿ ೫೫ ದಶಲಕ್ಷ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ.
ಭಾಷಾ ಕುಟುಂಬ:
ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ
ತಮಿಳು - ಕನ್ನಡ
ಕನ್ನಡ – ಬಡಗ
ಕನ್ನಡ ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕರ್ನಾಟಕ.
ಭಾರತ ನಿಯಂತ್ರಿಸುವ ಪ್ರಾಧಿಕಾರ:
ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು.
ಭಾಷೆಯ ಸಂಕೇತಗಳು
ISO 639-1:
kn
ISO 639-2:
kan
ISO/FDIS 639-3:
ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.
ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ. ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.
ಸಂಸ್ಕೃತದ ಪ್ರಭಾವ
ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.
ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳ್ಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ.
ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.
ನಮ್ಮ ಕನ್ನಡವನ್ನು ಉಳಿಸೋಣ ಇನ್ನೂ ಎತ್ತರಕ್ಕೆ ಬೆಳೆಸೋಣ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
No comments:
Post a Comment